ಮನೆ ರಾಜಕೀಯ ಮೋದಿ ಕ್ಯಾಮೆರಾ ಹಿಡಿದು ಓಡಾಡುವ ಬದಲು, ಜನರ ಕಷ್ಟ ಆಲಿಸಬೇಕಿತ್ತು: ಎಚ್.ಡಿ. ಕುಮಾರಸ್ವಾಮಿ

ಮೋದಿ ಕ್ಯಾಮೆರಾ ಹಿಡಿದು ಓಡಾಡುವ ಬದಲು, ಜನರ ಕಷ್ಟ ಆಲಿಸಬೇಕಿತ್ತು: ಎಚ್.ಡಿ. ಕುಮಾರಸ್ವಾಮಿ

0

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕ್ಯಾಮೆರಾ ಹಿಡಿದು ಓಡಾಡುವ ಬದಲು, ಬಡ ಜನರು ವಾಸಿಸುವ ಕಡೆಗೆ ಹೋಗಬೇಕಿತ್ತು. ಅವರ ಕಷ್ಟ ಆಲಿಸಬೇಕಿತ್ತು ವನ್ಯ ಜೀವಿಗಳ ದಾಳಿಗೊಳಗಾದವರ ಅಳಲನ್ನು‌ ಪ್ರಧಾನಿ ಆಲಿಸಬೇಕಿತ್ತು ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Join Our Whatsapp Group

ನಗರದ ಗಣೇಶಪೇಟೆಯಲ್ಲಿ ಮಂಗಳವಾರ ನಡೆದ ಪಕ್ಷದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಹೊಳೆ ಹರಿಸುತ್ತೇವೆ ಎನ್ನುವ ಬಿಜೆಪಿಯವರು, ರಾಜ್ಯದಲ್ಲಿ ಎಂಟು ವರ್ಷ ಏನು ಮಾಡಿದ್ದಾರೆ? ಹುಬ್ಬಳ್ಳಿಯಲ್ಲಿ ರಸ್ತೆಗಳ ಸ್ಥಿತಿ ಅಧೋಗತಿ ತಲುಪಿವೆ. ಆದರೆ, ಕೋಟ್ಯಾಂತರ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳುತ್ತಾರೆ. ಹಾಗಾದರೆ, ಹಣ ಎಲ್ಲಿಗೆ ಹೋಯಿತು? ಕೇಂದ್ರದಲ್ಲಿ ಪೂರ್ಣ ಬಹುಮತ ಸರ್ಕಾರ‌ ಇದ್ದರೂ ಏನೂ ಆಗಿಲ್ಲ. ಹಳ್ಳಿಗಳ ಸ್ಥಿತಿ ಬದಲಾಗಿಲ್ಲ. ದೇಶ ಸ್ವಚ್ಛ ಭಾರತವಾಗಿದೆ ಎಂದು ಮೋದಿ, ಜೋಶಿ ಪೊರಕೆ ಹಿಡಿದು ಪೋಸ್ ಕೊಟ್ಟಿದ್ದಾರೆ. ಆದರೆ, ಹಳ್ಳಿಗಳಲ್ಲಿ ಶೌಚಾಲಯಗಳೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮಹದಾಯಿಗಾಗಿ ಪಾದಯಾತ್ರೆ ಮಾಡಿದ‌ವರು, ಈಗ ಮುಖ್ಯಮಂತ್ರಿಯಾಗಿ ಏನು ಮಾಡಿದರು? ಡಿಪಿಆರ್ ಆಗಿದೆ ಎಂದು ಸಿಹಿ ಹಂಚಿದರು. ಆದರೆ, ಈಗ ಏನಾಗಿದೆ. ಏನೂ ಕೊಡದಿದ್ದರೂ ಪರವಾಗಿಲ್ಲ. ನೆಮ್ಮದಿಯಾಗಿ ಬದುಕಲು ಸಹ ಬಿಜೆಪಿಯವರು ಬಿಡಲ್ಲ. ಹುಬ್ಬಳ್ಳಿ ಗಲಭೆಯಲ್ಲಿ ಬಂಧಿತರಾದ 150 ಮಂದಿ ಇನ್ನೂ ಬಿಡುಗಡೆ ಆಗಿಲ್ಲ. ಧರ್ಮಗಳ ನಡುವಿನ ಸಾಮರಸ್ಯವನ್ನು ಕದಡುವುದೇ ಬಿಜೆಪಿ ಕೆಲಸ. ಬಜರಂಗದಳದವರು ಹಿಂದುತ್ವದ ಹೆಸರಲ್ಲಿ ರೌಡಿಗಳಂತೆ ಸಮಾಜದ ಶಾಂತಿ ಹಾಳು ಮಾಡುತ್ತಿದ್ದಾರೆ. ನನಗೆ ಅಧಿಕಾರ ಸಿಕ್ಕರೆ ಅವರಿಗೆ ಕಡಿವಾಣ ಹಾಕುವೆ ಎಂದು ಭರವಸೆ ನೀಡಿದರು.

ಈಗ ಬಿಜೆಪಿಯವರು 2047 ರವರೆಗೆ ಅಧಿಕಾರ ಕೊಡಿ ಎನ್ನುತ್ತಿದ್ದಾರೆ. ನನಗೆ ಕೇವಲ 2028ರವರೆಗೆ ಅಧಿಕಾರ ಕೊಡಿ. ನಾನು ಹೇಳಿದ್ದನ್ನು ಮಾಡದಿದ್ದರೆ ಮತ್ತೆ ನಿಮ್ಮ ಎದುರಿಗೆ ಬರುವುದಿಲ್ಲ. ಪಂಚರತ್ನ ಯೋಜನೆಗಳ ಜಾರಿಗೆ 2.5 ಲಕ್ಷ ಕೋಟಿ ಬೇಕು. ನೀವು ಎರಡು ಅಥವಾ ಮೂರು ಸೀಟು‌ಕೊಟ್ಟರೆ ಯೋಜನೆಗಳ ಜಾರಿ ಸಾಧ್ಯವಿಲ್ಲ. ಕಳ್ಳ-ಕಾಕರ ಜೊತೆ ಸೇರಿ ಅತ್ಯಲ್ಪ ಅವಧಿಯ ಸರ್ಕಾರ ಮಾಡಿದರೂ ಸಾಧ್ಯವಾಗದು. ಪೂರ್ಣ ಬಹುಮತ ಕೊಡಿ ಎಂದು ಮನವಿ ಮಾಡಿದರು.

ಹಿಂದಿನ ಲೇಖನಅಸ್ತಿತ್ವದಲ್ಲಿಲ್ಲದರ ಬಗ್ಗೆ ಕೊರಗು ಏಕೆ ?
ಮುಂದಿನ ಲೇಖನಭಾರತದಲ್ಲಿ ಈ ಬಾರಿ ಸಾಧಾರಣ ಮುಂಗಾರು: ಹವಾಮಾನ ಇಲಾಖೆ