ಮನೆ ಸುದ್ದಿ ಜಾಲ ” ಪುನೀತ್ ರಾಜ್‍ಕುಮಾರ್ ರಸ್ತೆ ” ನಾಮಕರಣಕ್ಕೆ ಅಧಿಕೃತ ಅನುಮೋದನೆ

” ಪುನೀತ್ ರಾಜ್‍ಕುಮಾರ್ ರಸ್ತೆ ” ನಾಮಕರಣಕ್ಕೆ ಅಧಿಕೃತ ಅನುಮೋದನೆ

0

ಬೆಂಗಳೂರು: 12 ಕಿ.ಮೀ ಉದ್ದದ ವರ್ತುಲ ರಸ್ತೆಗೆ ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಅಧಿಕೃತ ಅನುಮೋದನೆ ಸಿಕ್ಕಿದೆ.‌

ಎರಡು ಲೋಕಸಭಾ ಕ್ಷೇತ್ರಗಳು, ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು 14 ಬಿಬಿಎಂಪಿ ವಾರ್ಡ್​ಗಳನ್ನು ಹಾದುಹೋಗುವ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್​ವರೆಗಿನ 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣಕ್ಕೆ ಅನುಮೋದನೆ ನೀಡಲಾಗಿದೆ.

ಪುನೀತ್ ಹೆಸರು ನಾಮಕರಣ ಮಾಡುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿದ್ದರು. ಇದೀಗ ಅದನ್ನು ಪುರಸ್ಕರಿಸಿ ನಿಯಮಾನುಸಾರ ಕಂದಾಯ ಇಲಾಖೆಯ ಜಂಟಿ ಆಯುಕ್ತರು ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರು ಮತ್ತು ಕಂದಾಯ ಅಧಿಕಾರಿಗಳಿಗೆ ಕೂಡಲೇ ಕ್ರಮ ತೆಗೆದುಕೊಂಡು ಕಡತವನ್ನು ಮಂಡಿಸುವಂತೆ ಆದೇಶಿಸಿದ್ದರು.

ಅದರಂತೆ, ಇದೀಗ ರಸ್ತೆಯ ನಕ್ಷೆಯನ್ನು ತಯಾರಿಸಿ ಮತ್ತು ಈ ವ್ಯಾಪ್ತಿಯ ಸಾರ್ವಜನಿಕರಿಂದ ಆಕ್ಷೇಪಣೆಗಳ ಮಹಜರ್ ನಡೆಸಿದ ನಂತರ ಸುಮಾರು 700 ಕ್ಕೂ ಹೆಚ್ಚು ಮಂದಿ ಹಾಗೂ ರಸ್ತೆಗೆ ಹೊಂದಿಕೊಂಡಂತಿರುವ 09 ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಈ ರಸ್ತೆಗೆ ಅಪ್ಪು ಅವರ ಹೆಸರಿಡುವ ಪರವಾಗಿ ಸಹಿ ಮಾಡಿದ್ದಾರೆ. ಯಾರೊಬ್ಬರೂ ವಿರುದ್ಧವಾಗಿ ಸಹಿ ಮಾಡದೇ ಇದ್ದ ಕಾರಣ ಮುಖ್ಯ ಆಯುಕ್ತರ ಟಿಪ್ಪಣಿಯಂತೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕಾರಣ ಮಾಡುವ ಬಗ್ಗೆ ನಿರ್ಣಯ ಕೈಗೊಂಡು ಅಧಿಕೃತ ಅನುಮೋದನೆ ನೀಡಿದ್ದಾರೆ.

ಗೊರಗುಂಟೆ ಪಾಳ್ಯದಿಂದ (ಡಾ. ರಾಜ್ ಕುಮಾರ್, ಪಾರ್ವತಮ್ಮ ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಅವರ ಸಮಾಧಿಗಳು ಇರುವ ರಸ್ತೆ) ಮೈಸೂರು ರಸ್ತೆಯ ನಾಯಂಡ ಹಳ್ಳಿ ಜಂಕ್ಷನ್ ವರೆಗಿನ ವರ್ತುಲ ರಸ್ತೆಗೆ 2015 ರ ಏಪ್ರಿಲ್ 08 ರಂದು ಡಾ. ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ ಎಂದು ಬಿಬಿಎಂಪಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡು ಅಧಿಕೃತವಾಗಿ ರಸ್ತೆಯ ನಾಮಕರಣ ಸಮಾರಂಭವನ್ನು ಮಾಡಲಾಗಿತ್ತು. ಈಗ ಇದರ ಮುಂದುವರೆದ ಭಾಗವಾಗಿ ನಾಯಂಡ ಹಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್​ವರೆಗಿನ ವರ್ತುಲ ರಸ್ತೆಗೆ ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗುತ್ತಿದೆ.

ಆದಷ್ಟು ಶೀಘ್ರವಾಗಿ ಮುಖ್ಯಮಂತ್ರಿಗಳಿಂದ ಪುನೀತ್ ರಾಜ್‍ಕುಮಾರ್ ರಸ್ತೆಯ ನಾಮಕರಣ ಸಮಾರಂಭವನ್ನು ರಾಜ್ ಕುಟುಂಬದ ಎಲ್ಲಾ ಸದಸ್ಯರ ಹಾಜರಾತಿಯಲ್ಲಿ ಏರ್ಪಡಿಸಲಾಗುವುದು ಎಂದು ಎನ್.ಆರ್ ರಮೇಶ್ ಮಾಹಿತಿ ನೀಡಿದ್ದಾರೆ.‌

ಹಿಂದಿನ ಲೇಖನನೇಣಿಗೆ ಶರಣಾದ ರೈತ ಮುಖಂಡ; ಕೊಲೆ ಶಂಕೆ
ಮುಂದಿನ ಲೇಖನಎನ್‌ಎಸ್‌ಇ ಸಿಇಒ ಚಿತ್ರಾ ರಾಮಕೃಷ್ಣ ನಿವಾಸದ ಮೇಲೆ ಐಟಿ ದಾಳಿ