ಮನೆ ರಾಷ್ಟ್ರೀಯ ಮೊರ್ಬಿ ಸೇತುವೆ ಪುನಶ್ಚೇತನಕ್ಕೆ ಒರೆವಾ ಕಂಪನಿ ಪಡೆದಿದ್ದು 2 ಕೋಟಿ, ವ್ಯಯಿಸಿದ್ದು 12 ಲಕ್ಷ

ಮೊರ್ಬಿ ಸೇತುವೆ ಪುನಶ್ಚೇತನಕ್ಕೆ ಒರೆವಾ ಕಂಪನಿ ಪಡೆದಿದ್ದು 2 ಕೋಟಿ, ವ್ಯಯಿಸಿದ್ದು 12 ಲಕ್ಷ

0

ಮೊರ್ಬಿ: ಗುಜರಾತ್’ನ ಮೊರ್ಬಿ ಸೇತುವೆ ನವೀಕರಣಕ್ಕೆ ಗುತ್ತಿಗೆ ಪಡೆದಿದ್ದ ಒರೆವಾ ಕಂಪನಿಯು ಸೇತುವೆಯ ದುರಸ್ತಿಗೆಂದು ಪಡೆದುಕೊಂಡಿದ್ದ ಹಣದಲ್ಲಿ ಶೇ 6 ರಷ್ಟು ಮಾತ್ರ ವ್ಯಯಿಸಿದ್ದು, ಕಂಪನಿಯ ಭ್ರಷ್ಟಚಾರವೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಸೇತುವೆಯ ಪುನಶ್ಚೇತನಕ್ಕೆಂದು ನೀಡಲಾಗಿದ್ದ 2 ಕೋಟಿ ರೂಪಾಯಿಯಲ್ಲಿ ಕೇವಲ 12 ಲಕ್ಷ ರೂಪಾಯಿ ಮಾತ್ರ ಖರ್ಚು ಮಾಡಿ, ಸೇತುವೆ ಸಿದ್ದವಾಗಿದೆ ಎಂದು ಕಂಪನಿಯು ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಿತ್ತು. 143 ವರ್ಷ ಪುರಾತನ ಸೇತುವೆಯ ದುರಸ್ತಿಯಲ್ಲಿ ಕಳಪೆ ಕಾಮಗಾರಿ ಮಾಡಿತ್ತು. ಕಂಪನಿಯ ಬೇಜವಾಬ್ದಾರಿಗೆ 135 ಮಂದಿ ಬಲಿಯಾಗಿದ್ದರು.

ಸೇತುವೆಯ ಪುನಶ್ಚೇತನ ಹಾಗೂ 15 ವರ್ಷಗಳ ನಿರ್ವಹಣೆಗೆ ಒರೆವಾ ಗ್ರೂಪ್‌ ಮೊರ್ಬಿ ನಗರ ಪಾಲಿಕೆ ಜತೆಗೆ ಕಳೆದ ಮಾರ್ಚ್‌’ನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಸೇತುವೆಯನ್ನು ಪುನಶ್ಚೇತನಗೊಳಿಸಿದ್ದ ಕಂಪನಿಯು ಸುರಕ್ಷತಾ ಪರೀಕ್ಷೆ ನಡೆಸದೇ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಿತ್ತು.

ಸೇತುವೆ ಪುನಶ್ಚೇತನದ ಗುತ್ತಿಗೆ ಪಡೆದಿದ್ದ ಒರೆವಾ ಗ್ರೂಪ್‌’ಗೆ ಗಡಿಯಾರ ತಯಾರಿಸುವುದರಲ್ಲಿ ಅನುಭವ ಇತ್ತೇ ಹೊರತು  ಇಂತಹ ಕಾಮಗಾರಿ ಮಾಡುವುದರಲ್ಲಿ ಯಾವುದೇ ಅನುಭವ ಇರಲಿಲ್ಲ. ಹೀಗಾಗಿ ದೇವ್‌ ಪ್ರಕಾಶ್‌ ಸೊಲ್ಯೂಷನ್‌ ಎನ್ನುವ ಧಾರಗಾದ್ರ ಮೂಲಕ ಕಂಪನಿಗೆ ಹೊರ ಗುತ್ತಿಗೆ ನೀಡಿತ್ತು. ಆದರೆ ಹೊರ ಗುತ್ತಿಗೆ ಪಡೆದುಕೊಂಡ ಕಂಪನಿಗೂ ಈ ಸೇತುವೆ ದುರಸ್ತಿ ಬಗ್ಗೆ ತಾಂತ್ರಿಕ ಮಾಹಿತಿ ಇರಲಿಲ್ಲ. ಶತಮಾನಗಳಷ್ಟು ಹಳೆಯದಾದ ಸೇತುವೆಯನ್ನು ಗಟ್ಟಿಗೊಳಿಸಲು ಬೇಕಾದಷ್ಟು ಕೆಲಸಗಳನ್ನು ಆ ಕಂಪನಿಯು ಮಾಡಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಜಾರಿಯಲ್ಲಿದ್ದು, ತನಿಖಾ ಸಂಸ್ಥೆಗಳು ದೇವ್‌ ಪ್ರಕಾಶ್‌ ಸೊಲ್ಯೂಷನ್‌ ಕಂಪನಿಯಿಂದ ಕಾಮಗಾರಿಗೆ ಸಂಬಂಧಿಸಿದ ಹಣಕಾಸು ದಾಖಲೆಗಳನ್ನು ಜಪ್ತಿ ಮಾಡಿವೆ.

ಮೊರ್ಬಿ ತೂಗುಸೇತುವೆಯ ಕೇಬಲ್‌’ಗಳು ತುಕ್ಕು ಹಿಡಿದಿದ್ದರೂ ಅವುಗಳನ್ನು ಬದಲಾಯಿಸದೇ, ಅವುಗಳಿಗೆ ಬಣ್ಣ ಬಳಿಯಲಾಗಿತ್ತು. ಸೇತುವೆಯನ್ನು ಗಟ್ಟಿ ಮಾಡದೇ ಮೇಲ್ನೋಟಕ್ಕೆ ಮಾತ್ರ ಸುಂದರಗೊಳಿಸಲಾಗಿತ್ತು ಎಂದು ಮಾಹಿತಿ ಲಭಿಸಿದೆ.

ಹಿಂದಿನ ಲೇಖನಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮತ್ತೆ ಮೂವರನ್ನು ಬಂಧಿಸಿದ ಎನ್’ಐಎ
ಮುಂದಿನ ಲೇಖನಡಿ.8 ರಿಂದ 15 ರವರೆಗೆ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’