ಮನೆ ರಾಜ್ಯ ಮಂಗಳೂರು ಪಬ್‌ ನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ: ಬಜರಂಗ ದಳ ಕಾರ್ಯಕರ್ತರಿಂದ ತಡೆ

ಮಂಗಳೂರು ಪಬ್‌ ನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ: ಬಜರಂಗ ದಳ ಕಾರ್ಯಕರ್ತರಿಂದ ತಡೆ

0

ಮಂಗಳೂರು (Mangalore): ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ನಡೆಸುತ್ತಿದ್ದ ಬಲ್ಮಠದ ಪಬ್‌ವೊಂದರ ಮೇಲೆ ಬಜರಂಗ ದಳ ಕಾರ್ಯಕರ್ತರು ದಾಳಿ ನಡೆಸಿ ಪಾರ್ಟಿಗೆ ತಡೆಯೊಡ್ಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡು ಸಂಘಟನೆ ಕಾರ್ಯಕರ್ತರನ್ನು ಚದುರಿಸಿದರು.

ನಗರದ ಬಲ್ಮಠದ ರಿ-ಸೈಕಲ್‌ ದಿ ಲಾಂಜ್‌ ಪಬ್‌ನಲ್ಲಿ ನಗರದ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಬೀಳ್ಕೊಡುಗೆ ಕಾರ್ಯಕ್ರಮದ ಅಂಗವಾಗಿ ಪಾರ್ಟಿ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾನಮತ್ತರಾಗಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಬಜರಂಗ ದಳ ಕಾರ್ಯಕರ್ತರು ಪಬ್‌ಗೆ ಪ್ರವೇಶಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಕೆಲ ಕಾಲ ಪಬ್‌ನಲ್ಲಿ ಗೊಂದಲ ನಿರ್ಮಾಣವಾಗಿತ್ತು. ಪೊಲೀಸರು ಬಂದು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡು ಎಲ್ಲ ವಿದ್ಯಾರ್ಥಿಗಳನ್ನು ಕಳುಹಿಸಿದರು.

ಕೆಲ ದಿನಗಳ ಹಿಂದಷ್ಟೇ ನಗರದ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಅಸಭ್ಯ ವರ್ತನೆ ವಿಡಿಯೋ ವೈರಲ್‌ ಆಗಿತ್ತು. ಮಂಗಳೂರಿನಲ್ಲಿ ಪಬ್‌ ದಾಳಿ ಹೊಸತೇನಲ್ಲ. 2009ರಲ್ಲಿ ಬಲ್ಮಠದಲ್ಲಿರುವ ಇದೇ ಪಬ್‌ಗೆ ಹಿಂದೂ ಸಂಘಟನೆಗಳು ದಾಳಿ ನಡೆಸಿದ್ದು, ದೇಶಾದ್ಯಂತ ಭಾರಿ ಚರ್ಚೆಯಾಗಿತ್ತು. 2013ರಲ್ಲಿ ಪಡೀಲ್‌ನ ಹೋಂ ಸ್ಟೇ ಮೇಲೂ ದಾಳಿ ನಡೆದಿದ್ದು, ದೇಶಾದ್ಯಂತ ದೊಡ್ಡ ಚರ್ಚೆ ನಡೆದಿತ್ತು.

ಹಿಂದಿನ ಲೇಖನರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ: ಸೆ.5ಕ್ಕೆ ಅಂತಿಮ ವಿಚಾರಣೆ ನಡೆಸಲಿರುವ ಹೈಕೋರ್ಟ್‌
ಮುಂದಿನ ಲೇಖನದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ