ಮನೆ ಭಾವನಾತ್ಮಕ ಲೇಖನ ಸರಳ ಬದುಕಿನಿಂದ ಸಕಾರಾತ್ಮಕ ಚಿಂತನೆ

ಸರಳ ಬದುಕಿನಿಂದ ಸಕಾರಾತ್ಮಕ ಚಿಂತನೆ

0

ಅದೊಂದು ಊರು. ಅಲ್ಲೊಬ್ಬ ಮುದುಕ. ಅವನು ಪ್ರತಿಯೊಬ್ಬರ ಮೇಲೂ ರೇಗುತ್ತಿದ್ದ. ಯಾವಾಗಲೂ ಸಿಟ್ಟಿನ ಮುಖ. ಎಲ್ಲರೂ ಅವನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು. ಇವರ ಪ್ರಭಾವ ಎಷ್ಟಿತ್ತೆಂದರೆ ಊರಿನ ಕೆಲವರು ಅವನ ಮಾತು ಕೇಳಿ ಅವನ ಹಾಗೇ ಆಗಿದ್ದರು. ಆದರೆ, ಒಂದು ದಿನ ಇದ್ದಕ್ಕಿದ್ದಂತೆಯೇ ಅವನು ಖುಷಿಯಾಗಿದ್ದಾನಂತೆ ಎಂಬ ಸುದ್ದಿ ಊರೆಲ್ಲಹರಡಿತು. ಆವತ್ತು ಅವನ 80ನೇ ಹುಟ್ಟು ಹಬ್ಬವಾಗಿತ್ತು.

ಎಲ್ಲರೂ ಆಶ್ಚರ್ಯಚಕಿತರಾಗಿ ಅವನ ಬಳಿ ಕೇಳಿದರಂತೆ: ಏನು ಇಷ್ಟೊಂದು ಬದಲಾವಣೆ ಅಂತ.

ಅವನು ಹೇಳಿದ: ಮೊದಲು ನಾನು ಅವರು ಹಾಗಿರಬೇಕು, ಇವರು ಹೀಗಿರಬೇಕು. ಅದು ಸರಿಯಿಲ್ಲ, ಇದು ಸರಿಯಿಲ್ಲಎಂದು ಯೋಚನೆ ಮಾಡುತ್ತಿದ್ದೆ. ನನಗೆ ಎಲ್ಲವೂ ತಪ್ಪು ಅಂತ ಅನಿಸುತ್ತಿತ್ತು. ಇವತ್ತು ನಾನು ಏನೇ ಬಂದರೂ ಬಂದಂತೆ ಸ್ವೀಕರಿಸಲು ನಿರ್ಧರಿಸಿದ್ದೇನೆ. ಯಾರು ಹೇಗಿದ್ದಾರೋ ಹಾಗೇ ಒಪ್ಪಿಕೊಳ್ಳಲು ಬಯಸಿದ್ದೇನೆ. ಹಾಗಾಗಿ, ನನಗೆ ಈಗ ಯಾವ ಕಿರಿಕಿರಿಯೂ ಆಗುವುದಿಲ್ಲ. ತುಂಬ ಖುಷಿಯಾಗಿದ್ದೇನೆ.

ಎಷ್ಟೊಂದು ನಿಜ ಅಲ್ವಾ? ನಾವು ಇಲ್ಲದ್ದಕ್ಕೆ ಆಸೆ ಪಡುತ್ತಾ ಹೋದಾಗ ನಿರಾಸೆಯಾಗೋದೇ ಹೆಚ್ಚು. ಇರುವುದರಲ್ಲಿನೆಮ್ಮದಿ ಕಾಣಲು ಬಯಸಿದರೆ ಎಲ್ಲೆಲ್ಲೂಖುಷಿಯೇ ಕಾಣಿಸುತ್ತದೆ. ಕೆಲವು ಹೆತ್ತವರು ಮಕ್ಕಳಿಗೆ ಶೇಕಡಾ 99ಅಂಕ ಬಂದರೂ ಒಂದು ಮಾರ್ಕು ಯಾಕೆ ಕಡಿಮೆಯಾಯಿತು ಎಂದು ತಲೆ ಕೆಡಿಸಿಕೊಳ್ಳುತ್ತಾರೆ. ತಾವೂ ನೆಮ್ಮದಿ ಕಳೆದುಕೊಳ್ಳುವ ಜತೆಗೆ ಮಕ್ಕಳ ಮೇಲೂ ಒತ್ತಡ ಹೇರುತ್ತಾರೆ. ಅದೇ ಶೇಕಡಾ 80 ಅಂಕ ಪಡೆದ ಮಗುವಿನ ಹೆತ್ತವರು ಓ ಇಷ್ಟು ಬಂತಲ್ಲಸಾಕು ಎಂದು ಖುಷಿಪಟ್ಟರೆ ಮನೆ, ಮಗು ಎಲ್ಲರೂ ನೆಮ್ಮದಿಯಾಗಿರುತ್ತಾರೆ.

ನಮ್ಮೆ ಕಣ್ಣೆದುರೇ ಕೆಲವರು ಇರುತ್ತಾರೆ. ದಿನವಿಡೀ ಒಂದು ನಿಮಿಷವೂ ಬಿಡುವಿಲ್ಲವೇನೋ ಎಂಬಷ್ಟು ಬ್ಯುಸಿಯಾಗಿರುತ್ತಾರೆ. ದುಡ್ಡು ಮಾಡುವುದೇ ಅವರ ಕಾಯಕ. ಮನೆಗೆ ಹೊಸ ಹೊಸ ವಸ್ತುಗಳನ್ನು ನಿರಂತರವಾಗಿ ಖರೀದಿಸುತ್ತಾರೆ. ಮಕ್ಕಳಿಗೆ ವೈಭವದ ಡ್ರೆಸ್ ಮಾಡಿಸುತ್ತಾರೆ. ಆಗಾಗ ಹೊಸ ಹೊಸ ಕಾರುಗಳು ಬರುತ್ತವೆ. ಇಷ್ಟೆಲ್ಲಆದರೂ ಅವರಿಗೆ ಇದನ್ನೆಲ್ಲಅನುಭವಿಸುವ ಬಿಡುವೂ ಇಲ್ಲ, ಅಷ್ಟೆಲ್ಲಇದ್ದರೂ ಖುಷಿಯೂ ಇಲ್ಲ. ನೆಮ್ಮದಿಯೂ ಇಲ್ಲ. ಗಮನಿಸಿ ನೋಡಿ ನಮ್ಮ ಬದುಕು ಸರಳವಾಗಿದ್ದಷ್ಟೂ ನೆಮ್ಮದಿ ಹೆಚ್ಚಿರುತ್ತದೆ. ಯಾವಾಗ ಆಸೆಗಳದೋ, ವ್ಯಾಮೋಹದ್ದೋ ಬೆನ್ನು ಹತ್ತಲು ಹೊರಡುತ್ತೇವೋ ಅಲ್ಲಿಗೆ ನೆಮ್ಮದಿ ಕಳೆದುಹೋಗಲು ಆರಂಭವಾಗುತ್ತದೆ. ಬುದ್ಧ ಹೇಳಿದ ಆಸೆಯೇ ದುಃಖಕ್ಕೆ ಮೂಲ ಎಂಬ ಮಾತಿನ ಹಿಂದೆ ಇರುವ ತಾತ್ಪರ್ಯವೂ ಇದೇ.

ಸರಳವಾಗಿರೋಣ

ನೆಮ್ಮದಿಯ, ಸಕಾರಾತ್ಮಕ ಬದುಕಿನ ಮೂಲವೇ ಸರಳ ಬದುಕು. ಲಕ್ಷಾಂತರ ರೂಪಾಯಿ ಸಂಪಾದನೆ ಇದ್ದರಷ್ಟೇ ಸಂತೋಷ ದೊರೆಯುತ್ತದೆ ಎನ್ನುವುದು ಸುಳ್ಳು. ಬದುಕಿಗೆ ಸಾಕಾಗುವಷ್ಟು ಸಂಪಾದನೆಯೂ ಅದಕ್ಕಿಂತ ಹೆಚ್ಚಿನ ಖುಷಿಯನ್ನು ಕೊಡುತ್ತದೆ. ಹಾಗಂತ, ಶ್ರೀಮಂತಿಕೆ ಕೆಟ್ಟದೇನೂ ಅಲ್ಲ. ಶ್ರೀಮಂತಿಕೆ ಇದ್ದರೂ ನೆಮ್ಮದಿಯನ್ನು ಹೊಂದಲು ಕೂಡಾ ಸರಳ ಜೀವನವೇ ಸೋಪಾನ.

ಇನ್ನೊಬ್ಬರ ಜತೆ ಹೋಲಿಕೆ ಬೇಡ

ನಮಗೆ ಹೆಚ್ಚು ಕಿರಿಕಿರಿ ಅನಿಸುವುದು ಇನ್ನೊಬ್ಬರ ಜತೆ ಹೋಲಿಸಿಕೊಂಡಾಗ. ಮನೆ, ಕಾರು, ಬಂಗಲೆ, ದಿರಸು, ಮಕ್ಕಳು ಹೋಗುವ ಶಾಲೆ ವಿಚಾರದಲ್ಲಿನಾವು ಇನ್ನೊಬ್ಬರ ಜತೆ ಹೋಲಿಸಿಕೊಂಡಾಗಲೇ ನಮ್ಮ ನೆಮ್ಮದಿ ಕೆಡುವುದು. ನಮ್ಮ ಬದುಕು ನಮ್ಮದು ಎನ್ನುವುದನ್ನು ಅರ್ಥ ಮಾಡಿಕೊಂಡರೆ ಯಾವ ಸಮಸ್ಯೆಯೂ ಇಲ್ಲ. ಬಡತನವೂ ಸಿರಿತನ ಅನಿಸುವುದು ಆಗಲೇ.

ಇರುವುದರಲ್ಲಿ ಖುಷಿ ಇರಲಿ

ನಮ್ಮ ಮನೆ, ನಮ್ಮ ಮಕ್ಕಳ ಸಾಧನೆ, ನಮ್ಮ ಕುಟುಂಬದ ಬಗ್ಗೆ ಯಾವತ್ತೂ ಮನಸಿನಲ್ಲೊಂದು ಆದರ ಭಾವ ಇರಲಿ. ಅದು ಇದ್ದಾಗ ಯಾವ ಋುಣಾತ್ಮಕತೆಯೂ ಕಾಡುವುದಿಲ್ಲ. ಮಕ್ಕಳು ತೆಗೆಯುವ ಅಂಕಗಳು ನಮ್ಮ ಪ್ರತಿಷ್ಠೆಯಾಗುವುದು ಬೇಡ. ಅವರಿಗೆ ಸಿಗುವ ಕೆಲಸ ನಮ್ಮ ಸಾಮರ್ಥ್ಯಕ್ಕೆ ಅಳತೆಗೋಲಾಗುವುದು ಬೇಡ.

ಸಿಂಪಲ್ ಪಾಸಿಟೀವ್

‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎನ್ನುತ್ತಾರೆ ಅಡಿಗರು. ಇದು ಒಂದು ಹಂತದವರೆಗೆ ಮಾತ್ರ ಉಪಕಾರಿ. ಅತಿಯಾದರೆ ಅಪಾಯಕಾರಿ. ಇರುವುದನ್ನು ಚೆನ್ನಾಗಿ ಬಳಸಿಕೊಂಡು ನೆಮ್ಮದಿಯಾಗಿರುವುದನ್ನು ಕಲಿತುಕೊಂಡರೆ ಉತ್ತಮ. ಅದರಿಂದ ನಾನು ಸೋತವನು, ವಿಫಲ ಎಂಬ ಭಾವ ಕಾಡುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಧನಾತ್ಮಕವಾಗಿ ಇರಿಸುವ ದೊಡ್ಡ ಮಂತ್ರವೆಂದರೆ, ಅದು ಭಗವದ್ಗೀತೆಯಲ್ಲಿಕೃಷ್ಣ ಅರ್ಜುನನಿಗೆ ಹೇಳಿದ ನುಡಿ:

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ| ಮಾ ಕರ್ಮ ಫಲಹೇತುರ್ಭೂರ್ಮಾ ತೇ ಸಂಗೋಸ್ತ್ವ ಕರ್ಮಣಿ||

ಕರ್ಮ ಮಾಡುವುದು ಮಾತ್ರ ನಿನ್ನ ಕೆಲಸ. ಆದರೆ ಫಲದಲ್ಲಿಅಧಿಕಾರವಿಲ್ಲ. ಅಷ್ಟೇ ಅಲ್ಲ, ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷಿಯಾಗಿ ಫಲಕ್ಕೆ ಕಾರಣ ತಾನೆಂದುಕೊಳ್ಳಬೇಡ. ಮತ್ತು ಕರ್ಮ ಮಾಡದೇ ಇರಬೇಕೆಂಬ ಮನಸು ನಿನಗೆ ಹುಟ್ಟದಿರಲಿ. ಹಾಗಾಗಿ, ನಮ್ಮ ಕೆಲಸ ಮಾಡುತ್ತಾ ಇರೋಣ, ಫಲಾಫಲಗಳ ಬಗ್ಗೆ ತುಂಬ ಯೋಚನೆ ಮಾಡದಿರೋಣ.

ಹಿಂದಿನ ಲೇಖನನಳಿನ್ ಕುಮಾರ್ ಕಟೀಲ್ ವಿದೂಷಕ ಇದ್ದಂತೆ, ಮೆಚ್ಯೂರಿಟಿ ಇಲ್ಲ: ಸಿದ್ದರಾಮಯ್ಯ
ಮುಂದಿನ ಲೇಖನಮಡಿಕೇರಿ ದಸರಾದಲ್ಲಿ ಗೋಮಾತೆ ಮಹಿಮೆ ಸಾರುವ ಮಂಟಪ