ಮನೆ ರಾಜ್ಯ ಸ್ಯಾಂಟ್ರೊ ರವಿ ಪ್ರಕರಣ: ದಾಖಲೆ ಸಮೇತ ಮಾಹಿತಿ ಪಡೆದ ಎಡಿಜಿಪಿ ಅಲೋಕ್ ಕುಮಾರ್

ಸ್ಯಾಂಟ್ರೊ ರವಿ ಪ್ರಕರಣ: ದಾಖಲೆ ಸಮೇತ ಮಾಹಿತಿ ಪಡೆದ ಎಡಿಜಿಪಿ ಅಲೋಕ್ ಕುಮಾರ್

0

ಮೈಸೂರು(Mysuru): ಸ್ಯಾಂಟ್ರೊ ರವಿ ಪ್ರಕರಣದ ಹೆಚ್ಚಿನ ವಿಚಾರಣೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಮಂಗಳವಾರ ಮೈಸೂರಿಗೆ ಭೇಟಿ ನೀಡಿ, ಅಗತ್ಯ ಮಾಹಿತಿ ಪಡೆದರು.

ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಮಧ್ಯಾಹ್ನ ಮೂರು ಗಂಟೆಗಳ ಕಾಲ ಒಡನಾಡಿ ಸಂಸ್ಥೆಯ ಕಾರ್ಯದರ್ಶಿಗಳಾದ ಸ್ಟ್ಯಾನ್ಲಿ ಮತ್ತು ಪರಶುರಾಮ್‌, ಸಂತ್ರಸ್ತ ಮಹಿಳೆ ಹಾಗೂ ಕುಟುಂಬ ಸದಸ್ಯರಿಂದ ದಾಖಲೆಗಳ ಸಮೇತ ಮಾಹಿತಿ ಪಡೆದುಕೊಂಡರು.

ಸ್ಯಾಂಟ್ರೊ ರವಿ ವಿರುದ್ಧ 1986ರಿಂದ 2023ರ ಜ.2ರವರೆಗೆ ಆತನ ವಿರುದ್ಧ ದಾಖಲಾದ ಪ್ರಕರಣಗಳ ಮಾಹಿತಿ, ಆತನ ಹಣಕಾಸು ಸಂಸ್ಥೆಗಳ ಮಾಹಿತಿ, ಆಸ್ತಿ ದಾಖಲೆ, ಪ್ರಭಾವಿಗಳೊಂದಿಗೆ ಆತ ತೆಗೆಸಿಕೊಂಡಿರುವ ಭಾವಚಿತ್ರಗಳು, ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯಲ್ಲಿ ಆತನ ಪಾತ್ರದ ಕುರಿತಂತೆ 140 ಪುಟಗಳ ಸಮಗ್ರ ದಾಖಲೆಗಳನ್ನು ಸ್ಟ್ಯಾನ್ಲಿ, ಪರಶುರಾಮ್‌ ಅವರು ಎಡಿಜಿಪಿಗೆ ಸಲ್ಲಿಸಿದರು.

ಸ್ಯಾಂಟ್ರೊ ರವಿ ಸಂಚಿನಲ್ಲಿ ಭಾಗಿಯಾಗಿದ್ದ ಪೊಲೀಸ್‌ ಇನ್ಸ್‌’ಪೆಕ್ಟರ್‌ ಪ್ರವೀಣ್‌, ಸುಳ್ಳುಪಾತ್ರ ಹಾಗೂ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ಸಂತ್ರಸ್ತೆ, ಆಕೆಯ ಸಹೋದರಿಯನ್ನು ಬಂಧಿಸಿದ್ದಕ್ಕೆ ಪ್ರತಿಯಾಗಿ ಪೊಲೀಸ್‌ ಅಧಿಕಾರಿಗಳಿಗೆ ‘ಗೂಗಲ್‌ ಪೇ’ ಮೂಲಕ ಹಣ ಪಾವತಿಸಿದ ದಾಖಲೆಗಳನ್ನು ಸಂತ್ರಸ್ತೆ ಸಲ್ಲಿಸಿದರು.

ಸಮಾಜದ ಸ್ವಾಸ್ಥ್ಯವನ್ನು ಆರೋಪಿ ಹಾಳುಗೆಡವುತ್ತಿದ್ದು, ಆತನ ಒಡನಾಟದಿಂದ ಪೊಲೀಸ್‌ ಇಲಾಖೆಯ ಹಿರಿಯ– ಕಿರಿಯ ಅಧಿಕಾರಿಗಳು ಕಳಂಕಿತರಾಗಿದ್ದಾರೆ. ಅವರನ್ನೂ ಕೂಡ ತನಿಖೆಗೆ ಒಳಪಡಿಸಬೇಕು ಎಂದು ಒಡನಾಡಿ ಸಂಸ್ಥೆಯ ಪರವಾಗಿ ಹಕ್ಕೊತ್ತಾಯ ಮಂಡಿಸಿದರು.

ಆದಷ್ಟು ಶೀಘ್ರ ಬಂಧನ: ಆರೋಪಿಯನ್ನು ಇದುವರೆಗೂ ಏಕೆ ಬಂಧಿಸಿಲ್ಲ? ಇದರಿಂದ ನನಗೆ ಅನ್ಯಾಯವಾಗಿದೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ಎಡಿಜಿಪಿ ಅಲೋಕ್‌ ಕುಮಾರ್‌, ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಈಗಾಗಲೇ ವಿಶೇಷ ತಂಡ ರಚಿಸಿ, ಆತನ ಚಲನವಲನದ ಮೇಲೆ ನಿಗಾವಹಿಸಲಾಗಿದೆ. ಆದಷ್ಟು ಶೀಘ್ರ ಬಂಧಿಸಲಾಗುವುದು ಎಂದು ಸಂತ್ರಸ್ತೆಗೆ ಭರವಸೆ ನೀಡಿದರು.

ಸಮಗ್ರ ತನಿಖೆಗೆ ಸೂಚನೆ: ರವಿ ಪ್ರಕರಣದ ಇಂಚಿಂಚೂ ತನಿಖೆಯಾಗಬೇಕು. ಆತನ ವಿರುದ್ಧ ದಾಖಲಾಗಿರುವ ಪ್ರಕರಣ, ಹಣಕಾಸು ವ್ಯವಹಾರಗಳು, ಅತ್ಯಾಚಾರ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಅವರಿಗೆ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಸಭೆಯಲ್ಲಿಯೇ ಸೂಚನೆ ನೀಡಿದರು.

ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌, ಡಿಸಿಪಿ ಗೀತಾ, ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌, ವಿಜಯನಗರ ಎಸಿಪಿ ಶಿವಶಂಕರ್‌, ವಿಜಯನಗರ ಇನ್ಸ್‌’ಪೆಕ್ಟರ್‌ ರವಿಶಂಕರ್‌ ಇದ್ದರು.

ಹಿಂದಿನ ಲೇಖನಬಿಜೆಪಿಯವರಿಗೆ ದಲಿತರ ಮೇಲೆ ಪ್ರೀತಿ ಇದ್ದರೆ 2.5 ಲಕ್ಷ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಲಿ: ಆರ್.ಧ್ರುವನಾರಾಯಣ್
ಮುಂದಿನ ಲೇಖನತೊಂಡೆಕಾಯಿ-ಬೆಂಡೆಕಾಯಿಯ ಎದುರು ಸಕ್ಕರೆಕಾಯಿಲೆಯ ಆಟ ನಡೆಯಲ್ಲ!