ಮನೆ ಅಪರಾಧ ಅನೈತಿಕ‌ ಸಂಬಂಧದ ಶಂಕೆ; ಸಂಬಂಧಿ ಹತ್ಯೆ ಮಾಡಿ ಕಾರಿಗೆ ಬೆಂಕಿ, ಪತ್ನಿ ಕೊಲೆಗೂ ಯತ್ನ

ಅನೈತಿಕ‌ ಸಂಬಂಧದ ಶಂಕೆ; ಸಂಬಂಧಿ ಹತ್ಯೆ ಮಾಡಿ ಕಾರಿಗೆ ಬೆಂಕಿ, ಪತ್ನಿ ಕೊಲೆಗೂ ಯತ್ನ

0

ಕಲಬುರಗಿ: ಪತ್ನಿಯೊಂದಿಗೆ ಅನೈತಿಕ‌ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಮೇಲೆ ವರಸೆಯಲ್ಲಿ ಸಹೋದರನಾದ ಸಂಬಂಧಿಯ ಮೇಲೆಯೇ ಕಲ್ಲು ಎತ್ತಿಹಾಕಿ‌ ಕೊಲೆ ಮಾಡಿ, ಬಳಿಕ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಆಳಂದ ಹೊರವಲಯದ ಪ್ರಗತಿ ಕಾಲೊನಿಯಲ್ಲಿ ನಡೆದಿದೆ‌.

Join Our Whatsapp Group

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಡಗುರ ಗ್ರಾಮದ ನಿವಾಸಿ ರವಿಕುಮಾರ (38) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಆಳಂದ ತಾಲೂಕಿನ ಸಾವಳೇಶ್ವರ ನಿವಾಸಿ ವಿಜಯಕುಮಾರ ನೆಲ್ಲಗಿ ಕೊಲೆ ಆರೋಪಿಯಾಗಿದ್ದಾನೆ. ತನ್ನ ಪತ್ನಿ ಜೊತೆ ರವಿಕುಮಾರ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕೆ ಹೊಂದಿದ್ದ ವಿಜಯಕುಮಾರ, ತನ್ನದೇ ಕಾರಿನಲ್ಲಿ ಇಬ್ಬರನ್ನೂ ಕರೆತಂದು ಕೃತ್ಯ ಎಸಗಿದ್ದಾನೆ. ಇದೇ ವೇಳೆ, ಪತ್ನಿಯ ಕೊಲೆಗೂ ಯತ್ನಿಸಿದ್ದು, ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಲೆಯಾದ ರವಿಕುಮಾರನ‌ ಹೆಂಡತಿ ಹಾಗೂ ಆರೋಪಿ ವಿಜಯಕುಮಾರನ ಪತ್ನಿ ಇಬ್ಬರೂ ಅಕ್ಕ-ತಂಗಿಯರು. ಹೀಗಾಗಿ, ರವಿಕುಮಾರ ಮತ್ತು ವಿಜಯಕುಮಾರ ವರಸೆಯಲ್ಲಿ ಅಣ್ಣ-ತಮ್ಮ ಆಗಬೇಕು. ವಿಜಯಕುಮಾರ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದ. ಈ‌ ನಡುವೆ ತನ್ನ ಪತ್ನಿ ಹಾಗೂ ರವಿಕುಮಾರ ಮಧ್ಯೆ ಅನೈತಿಕ ಸಂಬಂಧ ಇದೆ ಎಂದು ವಿಜಯಕುಮಾರನಿಗೆ ಶಂಕೆ ಮೂಡಿತ್ತು‌. ಮಂಗಳವಾರ ತನ್ನದೇ ಕಾರಿನಲ್ಲಿ ಇಬ್ಬರನ್ನೂ ವಿಜಯಕುಮಾರ ಕರೆದುಕೊಂಡು ಆಳಂದ ಕಡೆಗೆ ಬಂದಿದ್ದ. ಬಳಿಕ ಮಾರ್ಗ ಮಧ್ಯದಲ್ಲಿ ಗಲಾಟೆ ನಡೆದಿದ್ದು, ಕೋಪಗೊಂಡ ವಿಜಯಕುಮಾರ ಕಲ್ಲು‌ ಎತ್ತಿಹಾಕಿ ರವಿಕುಮಾರನ ಕೊಲೆ ಮಾಡಿ, ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುದ್ದಿ ಹೇಳಲು ಕಾರಿನಲ್ಲಿ‌ ಕರೆದುಕೊಂಡು ಬಂದರೆ, ಪತ್ನಿ ಮತ್ತು ರವಿಕುಮಾರ ಸೇರಿ ತನಗೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದರು. ಆಗ, ರವಿಕುಮಾರನನ್ನು ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿದ್ದಾಗಿ ಕೊಲೆ ಆರೋಪಿ ವಿಜಯಕುಮಾರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಸದ್ಯ ಸ್ಥಳಕ್ಕೆ ಆಳಂದ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಆಳಂದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನವಾಣಿಜ್ಯ ಬಳಕೆಯ 19 ಕೆಜಿ ಎಲ್​ಪಿಜಿ ಸಿಲಿಂಡರ್​ ಬೆಲೆ ಕುಸಿತ
ಮುಂದಿನ ಲೇಖನಬಿಜೆಪಿಯಿಂದ ಕ್ಷೇತ್ರದ ಕಡೆಗಣನೆ ಮತ ಕೇಳಲು ಬಿಜೆಪಿಯವರಿಗೆ ನೈತಿಕತೆ ಇಲ್ಲ: ಪ್ರಿಯಾಂಕ್ ಖರ್ಗೆ