ಚೆನ್ನೈ : ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಬಹುಮತದ ಕೊರತೆಯಿದ್ದರೂ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ ಎಂದು ವರದಿಗಳು ತಿಳಿಸಿವೆ. ತಮಿಳುನಾಡಿನ ರಾಜಕೀಯದಲ್ಲಿ ದಳಪತಿ ವಿಜಯ್ ದರ್ಬಾರ್ ಆರಂಭವಾಗಿದೆ.
ಚೊಚ್ಚಲ ಪ್ರಯತ್ನದಲ್ಲೇ ನಟ ವಿಜಯ್ ಸ್ಪರ್ಧೆ ಮಾಡಿದ್ದ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವುದು ಅಷ್ಟೇ ಗಮನಾರ್ಹ ಸಂಗತಿ. ಚೊಚ್ಚಲ ಚುನಾವಣೆಯಲ್ಲೇ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದ್ರೆ ಬಹುಮತಕ್ಕೆ 118 ಸ್ಥಾನಗಳು ಬೇಕಿದ್ದು, 10 ಸ್ಥಾನಗಳ ಕೊರತೆಯಿದೆ. ಹೀಗಿದ್ದರೂ ಟಿವಿಕೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ ಎನ್ನಲಾಗ್ತಿದೆ. ಹೀಗಾಗಿ ಮೈತ್ರಿ ಕುರಿತ ಚರ್ಚೆಗಳು ಜೋರಾಗಿ ನಡೆಯುತ್ತಿದೆ.
ಟಿವಿಕೆ ಮುಖ್ಯಸ್ಥ ವಿಜಯ್, ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಪತ್ರ ಬರೆದು ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲರನ್ನು ಆಹ್ವಾನಿಸುವಂತೆ ರಾಜಭವನಕ್ಕೆ ಮನವಿ ಮಾಡಿದ್ದಾರೆ. ಜೊತೆಗೆ 2 ವಾರಗಳಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಹೇಳಿದ್ದಾರೆ.
ಮೂಲಗಳ ಪ್ರಕಾರ, ಇಮೇಲ್ ಮೂಲಕ ರಾಜಭವನಕ್ಕೆ ಪತ್ರ ಕಳುಹಿಸಲಾಗಿದೆ. ಎರಡು ವಾರಗಳಲ್ಲಿ ಪಕ್ಷವು ತನ್ನ ಬಹುಮತ ಸಾಬೀತುಪಡಿಸುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಸಲು ಎಲ್ಲ ವಿಜೇತ ಅಭ್ಯರ್ಥಿಗಳನ್ನು ಟಿವಿಕೆ ಪಕ್ಷದ ಕಚೇರಿಗೆ ವಿಜಯ್ ಆಹ್ವಾನಿಸಿದ್ದಾರೆ.
ಟಿವಿಕೆ ಪಕ್ಷವು ಸರ್ಕಾರ ರಚಿಸಲು ಮೂರು ಸಾಧ್ಯತೆಗಳಿವೆ. ಮೊದಲನೆಯದ್ದಾಗಿ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವುದು. ಇದು ಸಾಧ್ಯವಾಗದಿದ್ದಲ್ಲಿ, ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಒಡೆದು ಹೊಸ ಒಕ್ಕೂಟದ ರಚಿಸುವುದು ಅಥವಾ ಕನಿಷ್ಠ ಸ್ಥಿರ ಸರ್ಕಾರಕ್ಕಾಗಿ AIADMK ಯಿಂದ ಬಾಹ್ಯ ಬೆಂಬಲ ಕೇಳುವುದು ಮಾರ್ಗವಾಗಿದೆ.
ಕನಿಷ್ಠ ಸ್ಥಿರ ಸರ್ಕಾರಕ್ಕಾಗಿ AIADMK ಯಿಂದ ಬಾಹ್ಯ ಬೆಂಬಲ ಕೇಳುವುದು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆ ಸ್ಥಿರ ಸರ್ಕಾರಕ್ಕೆ ಪ್ರಯತ್ನ ಮಾಡಬಹುದು. ಆದರೆ ಇದು ಭವಿಷ್ಯದಲ್ಲಿ ಸಮಸ್ಯೆ ತರಬಹುದು. ಇದೆಲ್ಲದರ ನಡುವೆ ರಾಷ್ಟ್ರೀಯ ಕಾಂಗ್ರೆಸ್ ಟಿವಿಕೆಗೆ ಬೆಂಬಲ ನೀಡಲು ಮುಂದಾಗಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ನಿನ್ನೆ ದಳಪತಿ ವಿಜಯ್ ಅವರೊಂದಿಗೆ ಮಾತನಾಡಿ, ಅಭಿನಂದನೆ ಸಲ್ಲಿಸಿದ್ದಾರೆ.
















