ಮನೆ ಅಪರಾಧ ಕೊಡಲಿಯಿಂದ ಹಲ್ಲೆ ಮಾಡಿ ಪತ್ನಿಯನ್ನು ಕೊಂದ ಪತಿ, ಮಕ್ಕಳ ಮೇಲೂ ಹಲ್ಲೆ

ಕೊಡಲಿಯಿಂದ ಹಲ್ಲೆ ಮಾಡಿ ಪತ್ನಿಯನ್ನು ಕೊಂದ ಪತಿ, ಮಕ್ಕಳ ಮೇಲೂ ಹಲ್ಲೆ

0

ನವದೆಹಲಿ: ಪತ್ನಿಯನ್ನು ಪತಿ ಕೊಡಲಿಯಿಂದ ಕೊಚ್ಚಿ ಕೊಂದು, ಮಕ್ಕಳ ಮೇಲೂ ಹಲ್ಲೆ ಮಾಡಿರುವ ಘಟನೆ ದಕ್ಷಿಣ ದಿಲ್ಲಿಯ ನೆಬ್ ಸರೈ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ಎನ್‌ ಕ್ಲೇವ್‌ ನಲ್ಲಿ ನಡೆದಿದೆ.

Join Our Whatsapp Group

ದೆಹಲಿ ಪೊಲೀಸರ ಪ್ರಕಾರ ಈ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ವ್ಯಕ್ತಿಯೊಬ್ಬರು ಬೆಳಗ್ಗೆ 6.24ಕ್ಕೆ ಪಿಸಿಆರ್’​ಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದರು ಎಂದು ಪೊಲೀಸ್​ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ತಂಡ ಸ್ಥಳಕ್ಕೆ ತೆರಳಿದಾಗ ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ಮಹಿಳೆಯ ದೇಹವಿತ್ತು. ಅವರ ಕುತ್ತಿಗೆಯಲ್ಲಿ ಹಲವು ಗಾಯಗಳ ಗುರುತುಗಳಿದ್ದವು. ಅಲ್ಲದೆ 30 ವರ್ಷದ ಮಗಳು ಮತ್ತು 28 ವರ್ಷದ ಮಗ ಸಹ ಈ ಘಟನೆಯಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ತಂದೆ ವಿಜಯ್ ವೀರ್ ಎಂಬುವರು ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳುಗಳು ತಿಳಿಸಿದ್ದಾರೆ.

 ಘಟನಾ ಸ್ಥಳದಲ್ಲಿ ಆರೋಪಿ ಪತಿ ವಿಜಯ್ ವೀರ್ ಕೂಡ ಇದ್ದರು. ಅವರ ಎಡಗೈಗೂ ಗಾಯವಾಗಿದ್ದು, ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಚಾರಣೆ ವೇಳೆ ಮೃತ ಮಹಿಳೆ ಸುಮನ್, ಆರೋಪಿ ವಿಜಯ್ ವೀರ್ ನನ್ನು 1992ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾನೆ. ವಿಜಯ್ ವೀರ್ ಗರ್ಮುಕ್ತೇಶ್ವರ ಯುಪಿ ನಿವಾಸಿ. ಮದುವೆಯ ನಂತರ ಅವರು ನೆಬ್ ಸರೈನಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ವಿಜಯ್ ವಿವಾಹೇತರ ಸಂಬಂಧ ಹೊಂದಿದ್ದು, ಕುಟುಂಬದತ್ತ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ಹೆಂಡತಿ ಆತನನ್ನು ವಿರೋಧಿಸುತ್ತಿದ್ದಳು. ಈ ಹಿನ್ನೆಲೆಯಲ್ಲಿ ವಿಜಯ್​ ವೀರ್​ ಪತ್ನಿಗೆ ಚಿತ್ರಹಿಂಸೆ ನೀಡಿ ಥಳಿಸುತ್ತಿದ್ದ. ಮಕ್ಕಳಿಬ್ಬರೂ ತಾಯಿಗೆ ಆಸರೆಯಾಗುತ್ತಿದ್ದರು. ಹೀಗಾಗಿ ವಿಜಯ್​ ವೀರ್​ ತಮ್ಮ ಮಕ್ಕಳ ಮೇಲೂ ದೌರ್ಜನ್ಯ ತೋರುತ್ತಿದ್ದನು ಎಂದು ತನಿಖೆ ವೇಳೆ ತಿಳಿದುಬಂದಿದೆ.

2017ರಲ್ಲಿಯೂ ಇವರ ನಡುವೆ ಜಗಳ ನಡೆದಿದ್ದು, ಈ ವೇಳೆ ಆರೋಪಿ ಪತಿ ತನ್ನ ಕುಟುಂಬವನ್ನು ಕೊಂದು ಹಾಕಲು ಗುಂಡು ಹಾರಿಸಿದ್ದ ಎನ್ನಲಾಗಿದೆ. ಆ ಸಮಯ ಗಲಾಟೆಯಲ್ಲಿ ವಿಜಯ್​ ವೀರ್​ ತಮ್ಮ ಮಗನಿಗೆ ಗುಂಡು ಹಾರಿಸಿದ್ದರು. ಅದೃಷ್ಟವಶಾತ್​ ಆ ವೇಳೆ ಮಗನಿಗೆ ಯಾವುದೇ ಗಾಯಗಳಾಗಿರಲಿಲ್ಲ. ಈ ಘಟನೆ ಕುರಿತು ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ವಿಜಯ್ ವೀರ್​​ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಪರಸ್ಪರ ಮಾತುಕತೆ ನಡೆಸಿ ಪ್ರಕರಣ ರದ್ದುಪಡಿಸಲಾಯಿತು.

ಗುರುವಾರ ಬೆಳಗ್ಗೆ ಪತ್ನಿ ಮಲಗಿದ್ದ ವೇಳೆ ಕೊಡಲಿಯಿಂದ ಹಲ್ಲೆ ನಡೆಸಿ ಪತ್ನಿಯನ್ನು ಕೊಂದ ಬಳಿಕ ಮಕ್ಕಳ ಕೋಣೆಗೆ ತೆರಳಿ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಕ್ಕಳಿಬ್ಬರು ತಮ್ಮ ತಂದೆ ವಿಜಯ್​ ವೀರ್’​ನನ್ನು ಕೊಠಡಿಯೊಳಗೆ ಕೂಡಿ ಹಾಕಿ ಬೀಗ ಜಡಿದಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದರು. ಸದ್ಯ ಪೊಲೀಸರು ಈ ಸಂಬಂಧ ಆರೋಪಿಯನ್ನು ಬಂಧಿಸಿದ್ದು, ಮುಂದಿನ ತನಿಖೆ ಆರಂಭಿಸಿದ್ದಾರೆ.

ಹಿಂದಿನ ಲೇಖನಸಿದ್ದರಾಮನಹುಂಡಿಯಲ್ಲಿ ಕಾರು-ಬೈಕ್ ಡಿಕ್ಕಿಯಿಂದ ನಡೆದ ಜಗಳಕ್ಕೆ ಬಿಜೆಪಿಯಿಂದ ರಾಜಕೀಯ ಬಣ್ಣ: ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ
ಮುಂದಿನ ಲೇಖನಭಾನುವಾರ ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ