ಮನೆ ಯೋಗಾಸನ ದೇಹ, ಮನಸ್ಸನ್ನು ಆರೋಗ್ಯವಾಗಿಡಲು ಯೋಗ ಸಹಕಾರಿ: ಸಚಿವ ಎಸ್.ಟಿ.ಸೋಮಶೇಖರ್

ದೇಹ, ಮನಸ್ಸನ್ನು ಆರೋಗ್ಯವಾಗಿಡಲು ಯೋಗ ಸಹಕಾರಿ: ಸಚಿವ ಎಸ್.ಟಿ.ಸೋಮಶೇಖರ್

0

ಮೈಸೂರು(Mysuru): ಯೋಗ ಎನ್ನುವುದು ಭಾರತೀಯರಿಗೆ ಪರಂಪರಾಗತವಾಗಿ ಗುರುಹಿರಿಯರಿಂದ ಬಂದಂತಹ ಉಡುಗೊರೆ. ಪ್ರತಿನಿತ್ಯ ಯೋಗಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯವಾಗಿಡಲು ಸಹಕಾರಿಯಾಗಲಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಚಾಮುಂಡಿ ಬೆಟ್ಟದ ದೇವಸ್ಥಾನದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್ ಪಿವೈಎಸ್ ಎಸ್) ವತಿಯಿಂದ ಹಮ್ಮಿಕೊಂಡಿದ್ದ ಯೋಗ ಚಾರಣ ಮತ್ತು ದುರ್ಗನಮಸ್ಕಾರ ಕಾರ್ಯಕ್ರಮವನ್ನು  ಉದ್ಘಾಟನೆ ಮಾಡಿ ಮಾತನಾಡಿದರು.

ಯೋಗ ದಸರಾ ಸೇರಿದಂತೆ ಬಹುತೇಕ ಎಲ್ಲಾ ದಸರಾ ಕಾರ್ಯಕ್ರಮಗಳನ್ನು ಬಹಳ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಸಾವಿರ ಮೆಟ್ಟಿಲು ಹತ್ತಿ ಬಂದು ಯೋಗ ಮಾಡಿದ್ದಾರೆ. ಸೆ.26ರಿಂದ ಅ.3ರವರೆಗೆ ನಿತ್ಯ ಯೋಗಾಸನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಈ ಬಾರಿ ದಸರಾ ಕಳೆಕಟ್ಟಿದೆ. ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಎಲ್ಲಾ ಅಚ್ಚುಕಟ್ಟಾಗಿ ಮಾಡಲಾಗಿದ್ದು, ಪ್ರತ್ಯಕ್ಷ, ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.

ಬಹುತೇಕ ಕಾರ್ಯಕ್ರಮಗಳು ಇಂದು ಅಂತ್ಯವಾಗಲಿದೆ. ನಾಳೆ ಮೆರವಣಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಮುಖ್ಯಮಂತ್ರಿಗಳು ಸಹ ನಾಳೆ ಸಂಜೆ ಆಗಮಿಸಲಿದ್ದಾರೆ. ಎರಡು ವರ್ಷ ಕೋವಿಡ್ ನಿಂದ ಅದ್ದೂರಿ ದಸರಾ ಮಾಡಿರಲಿಲ್ಲ. ಉನ್ನತ ಮಟ್ಟದ ಸಮಿತಿ ತೀರ್ಮಾನದಂತೆ ಆಚರಣೆ ಮಾಡಲಾಗುತ್ತಿದ್ದು, ಅಧಿಕಾರಿಗಳು ಕೂಡ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಶಿವಣ್ಣ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೇ ಶ್ರೀನಿವಾಸ್, ಮೂಡಾ ಮಾಜಿ ಅಧ್ಯಕ್ಷರಾದ ರಾಜೀವ್, ಜಂಗಲ್ಸ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಮಾಜಿ ಅಧ್ಯಕ್ಷರಾದ ಅಪ್ಪಣ್ಣ ಸೇರಿದಂತೆ ನಾನಾ ನಿಗಮ ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಹಿಂದಿನ ಲೇಖನಹೈದರಾಬಾದ್‌: ಉಗ್ರ ದಾಳಿಗೆ ಸಂಚು ರೂಪಿಸಿದ್ದ ಮೂವರ ಬಂಧನ
ಮುಂದಿನ ಲೇಖನಶನಿವಾರ ನಡೆದ ಅಹಿತಕರ ಘಟನೆಗೆ  ಪೊಲೀಸರೇ ನೇರ ಕಾರಣ: ನಿಖಿಲ್ ಕುಮಾರಸ್ವಾಮಿ