ನವದೆಹಲಿ : ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕ್ ಪಂದ್ಯವಾಡದೇ ಇದ್ದರೆ ಎರಡು ತಂಡಗಳಿಗೆ 200 ಕೋಟಿ ರೂ. ಆದಾಯ ನಷ್ಟವಾಗುವ ಸಾಧ್ಯತೆಯಿದೆ. ಶ್ರೀಲಂಕಾಗೆ ನಮ್ಮ ತಂಡ ಆಗಮಿಸಿದ್ದರೂ ಭಾರತದ ವಿರುದ್ಧ ಪಂದ್ಯ ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಇದು ಪಾಕ್ ಸರ್ಕಾರದ ನಿರ್ಧಾರವಾಗಿದ್ದು ಅಧಿಕೃತವಾಗಿ ಪಿಸಿಬಿ ಐಸಿಸಿಗೆ ಈ ವಿಚಾರವನ್ನು ತಿಳಿಸಿಲ್ಲ.
ಒಂದು ವೇಳೆ ಪಂದ್ಯ ಆಡದೇ ಇದ್ದರೆ ಪಾಕಿಸ್ತಾನ ಕ್ರೀಡಾ, ಆರ್ಥಿಕ ಮತ್ತು ಆಡಳಿತಾತ್ಮಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಎರಡು ತಂಡಗಳು 200 ಕೋಟಿ ರೂ. ಆದಾಯವನ್ನು ಕಳೆದುಕೊಳ್ಳಲಿದೆ ಎಂದು ಮಾಧ್ಯಮ ವರದಿ ಮಾಡಿದೆ. ಅಷ್ಟೇ ಅಲ್ಲದೇ ಪಾಕ್ ಗ್ರೂಪ್ ಹಂತದಲ್ಲೇ ಹೊರ ಬೀಳುವ ಸಾಧ್ಯತೆಯಿದೆ. ಭಾರತದ ವಿರುದ್ಧ ಪಂದ್ಯವಾಡಲ್ಲ ಎಂದಿರುವ ಪಾಕಿಸ್ತಾನಕ್ಕೆ ಐಸಿಸಿ ಬಿಸಿ ಮುಟ್ಟಿಸಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ ಪಾಕ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿದೆ.

2026 ರ ಐಸಿಸಿ ಪುರುಷರ ಟಿ 20 ವಿಶ್ವಕಪ್ನಲ್ಲಿ ತನ್ನ ರಾಷ್ಟ್ರೀಯ ತಂಡವನ್ನು ಆಯ್ದ ಪಂದ್ಯಗಳಲ್ಲಿ ಭಾಗವಹಿಸುವಂತೆ ಸೂಚಿಸುವ ನಿರ್ಧಾರದ ಕುರಿತು ಪಾಕಿಸ್ತಾನ ಸರ್ಕಾರ ಮಾಡಿರುವ ಹೇಳಿಕೆಯನ್ನು ಐಸಿಸಿ ಗಮನಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ (ಪಿಸಿಬಿ) ಅಧಿಕೃತ ಸಂವಹನಕ್ಕಾಗಿ ಐಸಿಸಿ ಕಾಯುತ್ತಿದೆ. ಆಯ್ದ ಪಂದ್ಯಗಳಲ್ಲಿ ಭಾಗವಹಿಸುವ ಈ ನಿಲುವು ಜಾಗತಿಕ ಕ್ರೀಡಾಕೂಟದ ಮೂಲಭೂತ ಪ್ರಮೇಯದೊಂದಿಗೆ ಹೊಂದಾಣಿಕೆ ಮಾಡುವುದು ಕಷ್ಟ. ಅಲ್ಲಿ ಎಲ್ಲಾ ಅರ್ಹ ತಂಡಗಳು ನಿಗದಿಯಾಗಿರುವ ವೇಳಾಪಟ್ಟಿಯ ಪ್ರಕಾರ ಸಮಾನವಾಗಿ ಸ್ಪರ್ಧಿಸಬೇಕು.
ಐಸಿಸಿ ಪಂದ್ಯಾವಳಿಗಳು ಕ್ರೀಡಾ ಸಮಗ್ರತೆ, ಸ್ಪರ್ಧಾತ್ಮಕತೆ, ಸ್ಥಿರತೆ ಮತ್ತು ನ್ಯಾಯಸಮ್ಮತತೆಯ ಮೇಲೆ ನಿರ್ಮಿಸಲ್ಪಟ್ಟಿವೆ ಮತ್ತು ಆಯ್ದ ಭಾಗವಹಿಸುವಿಕೆಯು ಸ್ಪರ್ಧೆಗಳ ಉತ್ಸಾಹ ಮತ್ತು ಪವಿತ್ರತೆಯನ್ನು ಹಾಳು ಮಾಡುತ್ತದೆ. ರಾಷ್ಟ್ರೀಯ ನೀತಿಯ ವಿಷಯಗಳಲ್ಲಿ ಐಸಿಸಿ ಸರ್ಕಾರಗಳ ಪಾತ್ರಗಳನ್ನು ಗೌರವಿಸುತ್ತದೆಯಾದರೂ, ಈ ನಿರ್ಧಾರರಿಂದ ಪಾಕಿಸ್ತಾನದ ಲಕ್ಷಾಂತರ ಸೇರಿದಂತೆ ವಿಶ್ವಾದ್ಯಂತ ಅಭಿಮಾನಿಗಳಿಗೆ ನಿರಾಸೆಯಾಗುತ್ತದೆ.
ಪಿಸಿಬಿಯ ನಿರ್ಧಾರ ಜಾಗತಿಕ ಕ್ರಿಕೆಟ್ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪುರುಷರ ಟಿ20 ವಿಶ್ವಕಪ್ ಅನ್ನು ಯಶಸ್ವಿಯಾಗಿ ನಡೆಸುವುದು ಐಸಿಸಿಯ ಆದ್ಯತೆಯಾಗಿದೆ. ಇದು ಪಿಸಿಬಿ ಸೇರಿದಂತೆ ಎಲ್ಲಾ ಸದಸ್ಯರ ಜವಾಬ್ದಾರಿ. ಎಲ್ಲಾ ಪಾಲುದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಪರಸ್ಪರ ಸ್ವೀಕಾರಾರ್ಹ ನಿರ್ಣಯವನ್ನು ಪಿಸಿಬಿ ಅನ್ವೇಷಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ.















