ಕೋಲ್ಕತ್ತಾ : ನಂದಿಗ್ರಾಮದ ಹಿಂದೂ ಜನ ನನ್ನನ್ನ ಮತ್ತೆ ಗೆಲ್ಲಿಸಿದ್ದಾರೆ. ಇಲ್ಲಿನ ಇಡೀ ಮುಸ್ಲಿಂ ಮತಗಳು ಟಿಎಂಸಿಗೆ ಹೋದವು. ನಾನು ಇಲ್ಲಿನ ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ ಎಂದು ಭವಾನಿಪುರ ಹಾಗೂ ನಂದಿ ಗ್ರಾಮ ಕ್ಷೇತ್ರದ ವಿಜೇತ ಅಭ್ಯರ್ಥಿ ಸುವೇಂದು ಅಧಿಕಾರಿ ಹೇಳಿದರು.
ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರೀ ಮತಗಳ ಅಂತರದಿಂದ ಚುನಾವಣೆಯಲ್ಲಿ ಎದ್ದಿದ್ದೇನೆ. ನಂದಿಗ್ರಾಮದ ಹಿಂದೂ ಜನ ನನ್ನನ್ನ ಗೆಲ್ಲಿಸಿದ್ದಾರೆ. ಇಲ್ಲಿನ ಇಡೀ ಮುಸ್ಲಿಂ ಸಮುದಾಯದ ಮತಗಳು ಟಿಎಂಸಿಗೆ ಹೋಗಿವೆ. ನಾನು ನಂದಿ ಗ್ರಾಮದ ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ ಎಂದರು.
24 ಗಂಟೆಯಲ್ಲಿ ಟಿಎಂಸಿ ಸರ್ವನಾಶವಾಗುತ್ತದೆ. ಈ ಭ್ರಷ್ಟ ಕುಟುಂಬ ಆಧಾರಿತ ಪಕ್ಷಕ್ಕೆ ಯಾವುದೇ ಸಿದ್ಧಾಂತವಿಲ್ಲ. ನಾವು ಗೃಹ ಸಚಿವ ಅಮಿತ್ ಶಾ ಪ್ರಣಾಳಿಕೆಯಲ್ಲಿ ಘೋಷಿಸಿದ ಮತ್ತು ನರೇಂದ್ರ ಮೋದಿ ಅವರು ಮತ್ತೆ ಮತ್ತೆ ನೀಡಿದ ಭರವೆಸಗಳನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ಟಿಎಂಸಿ ಭದ್ರಕೋಟೆಯಾಗಿದ್ದ ಭವಾನಿಪುರದಲ್ಲಿ ಈ ಬಾರಿ ಹಾಲಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನ ಸುವೇಂದು ಅಧಿಕಾರಿ ಸೋಲಿಸಿದ್ದಾರೆ. ಬರೋಬ್ಬರಿ 15,105 ಮತಗಳ ಅಂತರದಿಂದ ದೀದಿ ಅವರನ್ನ ಪರಾಭವಗೊಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ 73,917 ಮತಗಳನ್ನು (15,105 ಮತಗಳ ಅಂತರದ ಮುನ್ನಡೆ) ಪಡೆದರೆ, ಮಮತಾ ಬ್ಯಾನರ್ಜಿ 58,812 ಮತಗಳನ್ನ ಪಡೆದುಕೊಂಡಿದ್ದಾರೆ.

















