ಬೆಂಗಳೂರು: ಇಂದಿನ ಕಾಲದಲ್ಲಿ ಪ್ರಾಮಾಣಿಕತೆ ಎಂಬುದೇ ಇಲ್ಲ ಎಂಬ ಮಾತುಗಳ ನಡುವೆ, ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಅಪ್ಪಟ ಪ್ರಾಮಾಣಿಕತೆಯಿಂದ ಜನರ ಮನ ಗೆದ್ದಿದ್ದಾನೆ. ಆಟೋ ಬಾಡಿಗೆಯಾಗಿ ಕೇವಲ 150 ರೂಪಾಯಿ ಡಿಜಿಟಲ್ ಪಾವತಿ ಮಾಡಬೇಕಿದ್ದ ಪ್ರಯಾಣಿಕನೊಬ್ಬ, ಆತುರದಲ್ಲಿ ಆಕಸ್ಮಿಕವಾಗಿ ಬರೋಬ್ಬರಿ 15,682 ರೂಪಾಯಿಗಳನ್ನು ಚಾಲಕನ ಖಾತೆಗೆ ವರ್ಗಾಯಿಸಿ ಆತಂಕಕ್ಕೊಳಗಾಗಿದ್ದನು. ಆದರೆ, ಪ್ರಯಾಣಿಕನ ತಪ್ಪು ಅರಿವಾದ ತಕ್ಷಣವೇ ಯಾವುದೇ ಹಿಂಜರಿಕೆಯಿಲ್ಲದೆ ಇಡೀ ಮೊತ್ತವನ್ನು ಪ್ರಾಮಾಣಿಕವಾಗಿ ಮರಳಿ ನೀಡುವ ಮೂಲಕ ಆಟೋ ಚಾಲಕ ಮಾನವೀಯತೆ ಮೆರೆದಿದ್ದಾನೆ. ತನಗಲ್ಲದ ಹಣ ಬೇಡ ಎಂಬ ಚಾಲಕನ ಈ ಉದಾತ್ತ ಗುಣದ ಕುರಿತು ಪ್ರಯಾಣಿಕ ಲಿಂಕ್ಡ್ಇನ್ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಹೃದಯಸ್ಪರ್ಶಿ ಕಥೆ ನೆಟ್ಟಿಗರ ಅಪಾರ ಪ್ರಶಂಸೆಗೆ ಪಾತ್ರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ ಎನ್ನಲಾಗಿದೆ.

ಆದರೆ ಸಾಮಾನ್ಯ ದಿನದಂತೆ ಪ್ರಯಾಣಿಕನೊಬ್ಬ ಆಟೋದಲ್ಲಿ ಪ್ರಯಾಣಿಸಿದ್ದನು. ಪ್ರಯಾಣ ಮುಗಿದ ಬಳಿಕ ಆಟೋ ಬಾಡಿಗೆಯನ್ನು ಆನ್ಲೈನ್ ಮೂಲಕ ಪಾವತಿಸುವಾಗ, ಆ ಪ್ರಯಾಣಿಕನಿಂದ ದೊಡ್ಡದೊಂದು ಎಡವಟ್ಟಾಗಿದೆ. ಚಾಲಕನಿಗೆ ಕಳುಹಿಸಬೇಕಾದ ಸಣ್ಣ ಮೊತ್ತ ಅಂದರೆ 156ರೂ. ಬದಲಿಗೆ, ಆಕಸ್ಮಿಕವಾಗಿ ಬರೋಬ್ಬರಿ 15,682ರೂ. ಹಣವನ್ನು ಚಾಲಕನ ಖಾತೆಗೆ ವರ್ಗಾಯಿಸಿದ್ದಾನೆ. ಟ್ರಾನ್ಸಾಕ್ಷನ್ ಪೂರ್ಣಗೊಂಡ ಮೇಲೆಯೇ ಪ್ರಯಾಣಿಕನಿಗೆ ತಾನು ಮಾಡಿದ ತಪ್ಪು ಅರಿವಿಗೆ ಬಂದಿದೆ. ಅಪರಿಚಿತ ಆಟೋ ಚಾಲಕನಿಂದ ಇಷ್ಟು ದೊಡ್ಡ ಮೊತ್ತದ ಹಣ ಮರಳಿ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲೇ ಆತ ಚಾಲಕನನ್ನು ಸಂಪರ್ಕಿಸಲು ಯತ್ನಿಸಿದ್ದಾನೆ. ಆದರೆ, ಪ್ರಯಾಣಿಕನ ಆತಂಕ ಕ್ಷಣಾರ್ಧದಲ್ಲಿ ದೂರಾಗಿದೆ. ಪ್ರಯಾಣಿಕ ಸಂಪರ್ಕಿಸಿದ ತಕ್ಷಣವೇ ಸ್ಪಂದಿಸಿದ ಆಟೋ ಚಾಲಕ, ತನ್ನ ಖಾತೆಗೆ ಹೆಚ್ಚುವರಿ ಹಣ ಬಂದಿರುವುದನ್ನು ಒಪ್ಪಿಕೊಂಡಿದ್ದಾನಲ್ಲದೆ, ಅಲ್ಲದೇ ಸಂಪೂರ್ಣ ಮೊತ್ತವನ್ನು ತಕ್ಷಣವೇ ಪ್ರಯಾಣಿಕನಿಗೆ ಮರಳಿ ವರ್ಗಾಯಿಸಿದ್ದಾನೆ.

ತನಗಲ್ಲದ ಹಣ ತನಗೆ ಬೇಡ ಎಂಬ ಚಾಲಕನ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ತಮಗೆ ಎದುರಾದ ಈ ಅಪರೂಪದ ಅನುಭವವನ್ನು ಲಿಂಕ್ಡ್ಇನ್ನಲ್ಲಿ ಹಂಚಿಕೊಂಡಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ. “ಇಂತಹ ಘಟನೆಗಳು ಮನುಷ್ಯತ್ವದ ಮೇಲಿನ ನಂಬಿಕೆಯನ್ನು ಮತ್ತೆ ಚಿಗುರಿಸುತ್ತವೆ” ಎಂದು ಸಾವಿರಾರು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
















