ಮನೆ ರಾಜಕೀಯ ಸಿದ್ದರಾಮಯ್ಯ ಮಹಾನ್ ಸುಳ್ಳುಗಾರ: ವಿ.ಶ್ರೀನಿವಾಸ್ ಪ್ರಸಾದ್ 

ಸಿದ್ದರಾಮಯ್ಯ ಮಹಾನ್ ಸುಳ್ಳುಗಾರ: ವಿ.ಶ್ರೀನಿವಾಸ್ ಪ್ರಸಾದ್ 

0

ಮೈಸೂರು(Mysuru): ಸಿದ್ದರಾಮೋತ್ಸವ ಆಚರಣೆಯ ಅಗತ್ಯವಿರಲಿಲ್ಲ. ಸಿದ್ದರಾಮೋತ್ಸವದಿಂದಾಗಿ ಕಾಂಗ್ರೆಸ್ ನಲ್ಲಿಯೇ ಗೊಂದಲಗಳು ಆರಂಭವಾಗಿವೆ. ಸಿದ್ದರಾಮಯ್ಯ ಮಹಾನ್ ಸುಳ್ಳುಗಾರ. ಅವರ ಹಸಿ ಸುಳ್ಳುಗಳನ್ನು ಕಂಡು ನನಗೂ ಆಶ್ಚರ್ಯವಾಗಿದೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್  ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಿದ್ದರಾಮಯ್ಯ ಮತ್ತು  ಡಿಕೆ ಶಿವಕುಮಾರ್ ಮಧ್ಯೆ ಮೇಕೆದಾಟುವಿನಿಂದ ಶುರುವಾದ ಜಗಳ ಸಿದ್ದರಾಮೋತ್ಸವಕ್ಕೂ ಮುಂದುವರೆದಿದೆ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಲೇವಡಿ ಮಾಡಿದ್ದಾರೆ.

ರಾಜಕೀಯ ಅಸ್ತಿತ್ವ ರೂಪಿಸಿಕೊಂಡು ಜಿಲ್ಲೆಯಲ್ಲೇ ಸೋತು ಸುಣ್ಣವಾಗಿದ್ದಾರೆ. ಮುಖ್ಯಮಂತ್ರಿಯಾಗಿ 36 ಸಾವಿರ ಮತಗಳಿಂದ ಅವರು ಸೋತಿದ್ದೇಕೆ. ರಾತ್ರೋರಾತ್ರಿ ಚಾಮುಂಡೇಶ್ವರಿ ಬಿಟ್ಟು ಬಾದಾಮಿಗೆ ಪಲಾಯನ ಮಾಡಿದ್ದೇಕೆ.? ಇದೇ ಕಾರಣಕ್ಕೆ ನಾನು ಹೇಳಿರೋದು ಸಿದ್ದರಾಮೋತ್ಸವನ್ನ ಮುಂದೆ ಒಂಟಿಕೊಪ್ಪಲ್ ಪಂಚಾಂಗದಲ್ಲಿ ಸೇರಿಸಬೇಕು ಅಂತಾ. ಕೇವಲ ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಈ ಉತ್ಸವ ಮಾಡುತ್ತಿರೋದು ಬಿಟ್ಟರೇ ಇನ್ನಾವ ಕಾರಣವಿಲ್ಲ ಎಂದು ಟೀಕಿಸಿದರು.

ಮೋದಿಯವರನ್ನು ಟೀಕಿಸುತ್ತಿಲೇ ಕಾಂಗ್ರೆಸ್ ಸರ್ವನಾಶ:  ಬಿಜೆಪಿಯವರು ಹೇಳಿರೋ ಡಬಲ್ ಇಂಜಿನ್ ಸರ್ಕಾರ ಎನ್ನುವುದರಲ್ಲಿ ತಪ್ಪೇನಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತಲ್ಲಿರುವುದರಿಂದ ರಾಜ್ಯಕ್ಕೆ ಕೇಂದ್ರ ಸರ್ಕಾರದ ಬಲ ಇರುವುದರಿಂದ ಅದನ್ನು ಡಬಲ್ ಇಂಜಿನ್ ಸರ್ಕಾರ ಅಂತಾ ಹೇಳಿದ್ದಾರೆ. ಪ್ರಧಾನಿ ಮೋದಿ ಮತ್ತು ಸಿಎಂ‌ ಬಸವರಾಜ ಬೊಮ್ಮಾಯಿ ಇಬ್ಬರೂ ಸಂಭಾವಿತರು. ಆದರೆ ಇಂತಹ ನಾಯಕತ್ವ ಕಾಂಗ್ರೆಸ್ ನಲ್ಲಿಲ್ಲ. ಮೋದಿಯವರನ್ನು ಟೀಕಿಸುತ್ತಿಲೇ ಕಾಂಗ್ರೆಸ್ ಸರ್ವನಾಶ ಆಗ್ತಿದೆ. ಟೀಕಿಸಿದಷ್ಟು ಮೋದಿ ಪ್ರಬಲರಾಗಿ ಬೆಳೆದಿದ್ದಾರೆ ಎಂದರು.

ಬೊಮ್ಮಾಯಿ ಅವರ ಸರಳತೆ, ವಿಧೇಯತೆ, ಜನರಿಗೆ ಸ್ಪಂದಿಸುವ ಗುಣ ನಿಜಕ್ಕೂ ಮೆಚ್ಚುವಂತದ್ದು. ಬೊಮ್ಮಾಯಿ ಅವಧಿ ಪೂರ್ಣಗೊಳಿಸುವುದರಲ್ಲಿ ಸಂಶಯವಿಲ್ಲ. ಸಿಎಂಗೆ ಮಂಡಿ ನೋವಿನ ಸಮಸ್ಯೆ ಇರಬಹುದು, ಹೈಕಮಾಂಡ್ ಈ ವಿಚಾರ ನೋಡಿಕೊಳ್ಳುತ್ತೆ. ಯಡಿಯೂರಪ್ಪ ಅವರು ನೇಪಥ್ಯಕ್ಕೆ ಸರಿದದ್ದರಿಂದ ಬಿಜೆಪಿಗೆ ಹೆಚ್ಚು ನಷ್ಟವಾಗಲ್ಲ ಎಂದು ಹೇಳಿದರು.

ಬಿಜೆಪಿಯನ್ನು ಹಿಂದೆ ಬೆಂಬಲಿಸುವವರು ಮುಂದೆಯೂ ಬೆಂಬಲಿಸುತ್ತಾರೆ. ಮೈಸೂರು ಭಾಗದಲ್ಲಿ ಮಾತ್ರ ಬಿಜೆಪಿಗೆ ಸಂಘಟನೆ ಕೊರತೆ ಇದೆ. ಇದರಿಂದಾಗಿ ಕೆಲವು ಚುನಾವಣೆಗಳಲ್ಲಿ ಸೋಲಾಗಿರಬಹುದು. ಆದರೆ ಸಾರ್ವತ್ರಿಕ ಚುನಾವಣೆ ನಡೆದರೆ ಬಿಜೆಪಿಯೇ ಮೇಲುಗೈ ಸಾಧಿಸುತ್ತದೆ. ಮೂರೂ ಪಕ್ಷಗಳು ನಡೆಸಿರೋ ಆಂತರಿಕ ಸಮೀಕ್ಷೆಯಲ್ಲೇ ಈ ವರದಿ ಬಂದಿದೆ ಎಂದು ಹೇಳಿದರು.