ಮನೆ ಅಪರಾಧ ಭೀಕರ ಅಪಘಾತ: ಮೂವರ ಸಾವು, ಆರು ಮಂದಿಗೆ ಗಂಭೀರ ಗಾಯ

ಭೀಕರ ಅಪಘಾತ: ಮೂವರ ಸಾವು, ಆರು ಮಂದಿಗೆ ಗಂಭೀರ ಗಾಯ

0

ಚಿತ್ರದುರ್ಗ: ಲಾರಿ ಮತ್ತು ಆಟೋ ನಡುವಿನ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಕಾತ್ರಾಳು ಕೆರೆಯ ಬಳಿ ನಡೆದಿದೆ.

ಮೃತರನ್ನು ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದ ಹಾಲಪ್ಪ (70), ರುದ್ರಮ್ಮ (58) ಹಾಗೂ ಸಣ್ಣ ಬಸವರಾಜಪ್ಪ (45)  ಎಂದು ಗುರುತಿಸಲಾಗಿದೆ.

ಘಟನೆ ವಿವರ:

ಮಾರಘಟ್ಟದಲ್ಲಿ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕೆಳಗೋಟೆ ಗ್ರಾಮದ ಒಂಬತ್ತು ಜನರು ಆಟೋದಲ್ಲಿ ಹೊರಟಿದ್ದರು. ಈ ವೇಳೆ ದಾವಣಗೆರೆಯಿಂದ ಚಿತ್ರದುರ್ಗದ ಕಡೆ ಬರುತ್ತಿದ್ದ ಐಷರ್​ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಆಟೋಗೆ ಡಿಕ್ಕಿ ಹೊಡೆದ ರಭಸಕ್ಕೆಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಎಲ್ಲರನ್ನೂ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಇದರಲ್ಲಿ ಮೂವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಉಳಿದಂತೆ ಕಲ್ಲೇಶಪ್ಪ, ಚಂದ್ರಪ್ಪ, ಪಾರ್ವತಮ್ಮ, ರುದ್ರೇಶಪ್ಪ, ಸಿದ್ದೇಶ್‌ ಸೇರಿ ಆರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಬಗ್ಗೆ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.