ಮೊಳಕಾಲ್ಮೂರು (Molakalmuru)-ಯುವತಿ ಮೇಲಿನ ಆಸಿಡ್ ದಾಳಿ ಅತ್ಯಂತ ಅಮಾನವೀಯ. ಅಪರಾಧಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೇಳಿದ್ದಾರೆ.
ಮೊಳಕಾಲ್ಮೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಯುವತಿ ಮೇಲಿನ ಆಸಿಡ್ ದಾಳಿ ಅತ್ಯಂತ ಅಮಾನವೀಯ. ನಮ್ಮ ತಾಯಿ ಮೇಲೆಯೂ ಇಂಥ ದಾಳಿ ನಡೆದಿತ್ತು. ಆ ನೋವು ಎಂಥದ್ದು ಎಂಬುದು ನನಗೆ ಮತ್ತು ನಮ್ಮ ಕುಟುಂಬಕ್ಕೆ ಗೊತ್ತಿದೆ. ಅಪರಾಧಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದರು.
ಮಾನವೀಯ ಸಂಬಂಧಗಳ ಬಗ್ಗೆ ಗೌರವ ಕಡಿಮೆ ಆಗುತ್ತಿದೆ. ಅದಕ್ಕೆ ಕಾರಣಗಳು ಹಲವು. ಆಸಿಡ್ ದಾಳಿಗೆ ಗುರಿಯಾದ ಹೆಣ್ಣುಮಗಳ ಪರಿಸ್ಥಿತಿ ನಿಜಕ್ಕೂ ನೋವಿನ ಸಂಗತಿ. ಮೈಸೂರಿನಲ್ಲಿ ಕುಡಿಯಲಿಕ್ಕೋ ಅಥವಾ ಸ್ಕೂಟರ್ ಖರೀದಿ ಮಾಡಲು ಹಣ ಕೊಡಲಿಲ್ಲ ಅಂತ ಅಕ್ಕನ ಮಗುವನ್ನೇ ಗೋಡೆಗೆ ಎಸೆದು ಸಾಯಿಸಿದ ಘಟನೆ ನಡೆದಿದೆ. ಇಂತಹ ಸಮಾಜವನ್ನು ಕಟ್ಟುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.