ಮನೆ ಸುದ್ದಿ ಜಾಲ ಅಂಬೇಡ್ಕರ್‌ ಜಯಂತಿ ಮೆರವಣಿಗೆಯಲ್ಲಿದ್ದವರ, ಮೇಲೆ ಮದ್ಯ ವ್ಯಸನಿಯಿಂದ ಕಾರು ಚಾಲನೆ – ಮಗು ಸ್ಥಳದಲ್ಲೇ ಸಾವು..!

ಅಂಬೇಡ್ಕರ್‌ ಜಯಂತಿ ಮೆರವಣಿಗೆಯಲ್ಲಿದ್ದವರ, ಮೇಲೆ ಮದ್ಯ ವ್ಯಸನಿಯಿಂದ ಕಾರು ಚಾಲನೆ – ಮಗು ಸ್ಥಳದಲ್ಲೇ ಸಾವು..!

0

ಚಿಕ್ಕಮಗಳೂರು : ಡಾ. ಬಿ.ಆರ್. ಅಂಬೇಡ್ಕರ್‌ ಜಯಂತಿ ಮೆರವಣಿಗೆ ವೇಳೆ ಭಾರಿ ಅಚಾತುರ್ಯವೊಂದು ಬಿಳೇಕಲ್ಲು ಗ್ರಾಮದಲ್ಲಿ ನಡೆದಿದೆ. ಮೆರವಣಿಗೆಯಲ್ಲಿದ್ದವರ ಮೇಲೆ ಮದ್ಯ ವ್ಯಸನಿ ಕಾರು ಚಲಾಯಿಸಿದ ಪರಿಣಾಮ 7 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. 7 ಜನರಿಗೆ ಗಾಯವಾಗಿದೆ.

7 ವರ್ಷದ ಮಗು ಸಾನ್ವಿ ಸಾವನ್ನಪ್ಪಿದೆ. 11 ವರ್ಷದ ನಿಶ್ಚಿತ್-ತೃಪ್ತಿ, ತಿಮ್ಮರಾಜು, ಉಷಾ, ಚೇತನ್, ಸೃಷ್ಠಿ ಹಾಗೂ ನಾಗರಾಜ್ ಗಾಯಗೊಂಡಿದ್ದು, ಹಾಸನದ ಮೆಡಿಕಲ್‌ ಕಾಲೇಜಿಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಅಪಘಾತವಾಗುತ್ತಿದ್ದಂತೆ ಕಾರು ಚಾಲಕ ಸುಧಾಕರ್‌ನನ್ನ ಹಿಡಿದು ಸ್ಥಳೀಯರು ಥಳಿಸಿದ್ದಾರೆ ಎನ್ನಲಾಗಿದೆ.

ಅಪಘಾತದ ಬಳಿಕ ಕಾರಿನಲ್ಲಿದ್ದ ಮತ್ತೋರ್ವ ಎಸ್ಕೇಪ್ ಆಗಿದ್ದಾನೆ. ಕಾರು ಚಾಲಕನನ್ನ ಸ್ಥಳೀಯರು ಜಿಲ್ಲಾಸ್ಪತ್ರೆಗೆ ರವಾನಿಸಿದರು. ಕಾರಿನ ಗಾಜುಗಳನ್ನ ಪುಡಿ-ಪುಡಿ ಮಾಡಿದ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಮುಂಭಾಗ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಕಾರು ಚಾಲಕನನ್ನ ಖಾಸಗಿ ಆಸ್ಪತ್ರೆಗೆ ರವಾನಿಸಲು ಸಜ್ಜಾದ ಆರೋಪ ಇದೆ. ಕಾರು ಚಾಲಕ ಚೆನ್ನಾಗಿದ್ದಾನೆ, ಗಾಯಾಳುಗಳ ಕಡೆ ಗಮನಹರಿಸಿ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು. ಸ್ಥಳದಲ್ಲಿ 50ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಕಲ್ಪಿಸಲಾಗಿತ್ತು. ಆಸ್ಪತ್ರೆ ಮುಂಭಾಗ ಆಕ್ರೋಶಿತರ ಸಮಾಧಾನ ಮಾಡಲು ಪೊಲೀಸರು ಮುಂದಾದರು.

ಈ ವೇಳೆ ಸ್ಥಳಕ್ಕೆ ಎಸ್‌ಪಿ ಜಯಕುಮಾರ್ ಭೇಟಿ ನೀಡಿದರು. ಎಸ್‌ಪಿ ಜಯಕುಮಾರ್ ಮುಂದೆ ಮಕ್ಕಳ ಪೋಷಕರು ಅಳಲು ತೋಡಿಕೊಂಡರು. ಆಕ್ರೋಶಿತರನ್ನ ಕೈ ಮುಗಿಯುತ್ತೇನೆ ಹೋಗಿ ಎಂದು ಎಎಸ್ಪಿ ಹೇಳಿ ಕಳಿಸಿದರು. ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.