ಮನೆ ರಾಜಕೀಯ ಫೆ.7 ರಂದು ಸಿಎಂ ದೆಹಲಿಗೆ: ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಫೆ.7 ರಂದು ಸಿಎಂ ದೆಹಲಿಗೆ: ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

0

ಬೆಂಗಳೂರು: ಗುರುವಾರ ನಿಗಧಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರ ದೆಹಲಿ ಪ್ರವಾಸ ಮುಂದೂಡಲಾಗಿದ್ದು, ಹೈಕಮಾಂಡ್ ಬರುವ ಸೋಮವಾರ ಭೇಟಿಗೆ ಸಮಯ ನಿಗದಿಪಡಿಸಿರುವುದರಿಂದ ಸೋಮವಾರ ದೆಹಲಿಗೆ ಹೋಗುತ್ತಿದ್ದಾರೆ.

ಮುಖ್ಯಮಂತ್ರಿಗಳ ದೆಹಲಿ ಭೇಟಿಯ ಪ್ರಮುಖ ಕಾರ್ಯಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ರಾಜ್ಯದ ಜಲ ವಿವಾದ ಕುರಿತು ದೆಹಲಿಯಲ್ಲಿ ಕಾನೂನು ತಜ್ಞರೊಂದಿಗೆ ಮಾತುಕತೆ, ಮುಂದಿನ ಮಾರ್ಚ್ ತಿಂಗಳಲ್ಲಿ ಮಂಡಿಸಲಿರುವ ರಾಜ್ಯ ಬಜೆಟ್ ಕುರಿತು ವರಿಷ್ಠರೊಂದಿಗೆ, ರಾಜ್ಯದ ಸಂಸದರೊಂದಿಗೆ ಚರ್ಚಿಸಿ ಅವರ ಸಲಹೆ, ಅಭಿಪ್ರಾಯ ಪಡೆಯುವುದಾಗಿದೆ.

ಸೋಮವಾರ ದೆಹಲಿಗೆ ಹೋಗುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದ ಬೆನ್ನಲ್ಲೇ ಇತ್ತ ರಾಜ್ಯದಲ್ಲಿ ಬಿಜೆಪಿಯೊಳಗೆ ರಾಜಕೀಯ ಚಟುವಟಿಕೆ ಗರಿಗೆದರಿದ್ದು ಸಚಿವಾಕಾಂಕ್ಷಿಗಳು ಕೂಡ ದೆಹಲಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ.

ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿ ರಮೇಶ್ ಜಾರಕಿಹೊಳಿ, ಮೈಸೂರಿನ ಎಸ್ ಎ ರಾಮದಾಸ್, ಹೊನ್ನಾಳಿಯ ಶಾಸಕ ಎಂ ಪಿ ರೇಣುಕಾಚಾರ್ಯ, ಚಿಕ್ಕಮಗಳೂರಿನ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ, ಬಸನಗೌಡ ಪಾಟೀಲ್ ಯತ್ನಾಳ್, ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ, ಚಿತ್ರದುರ್ಗದ ಜಿ ಎಚ್ ತಿಪ್ಪಾರೆಡ್ಡಿ, ಆನಂದ ಮಾಮನಿ ಮೊದಲಾದವರಿದ್ದಾರೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಮತ್ತು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.

ಸಂಪುಟ ವಿಸ್ತರಣೆ ವೇಳೆ ಕೆಲವು ಹಳೆ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು, ಕೆಲವು ಸಚಿವರು ಕ್ಷೇತ್ರದ ಕೆಲಸ ಮಾಡಿಸಿಕೊಳ್ಳಲು ಸಹಕಾರ ನೀಡುತ್ತಿಲ್ಲ ಎಂದು ಪತ್ರ ಬರೆದು ಸುದ್ದಿಯಾಗಿದ್ದ ರೇಣುಕಾಚಾರ್ಯ ಸಂಪುಟ ವಿಸ್ತರಣೆ ವಿಚಾರವನ್ನು ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿರುವುದಾಗಿ ತಿಳಿಸಿದ್ದಾರೆ.

ಬಜೆಟ್ ಪೂರ್ವಭಾವಿ ಸಭೆ ಮುಂದೂಡಿಕೆ: ಮಾರ್ಚ್ ಆರಂಭದಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡಬೇಕಿರುವುದರಿಂದ ಸಂಬಂಧಪಟ್ಟವರೊಂದಿಗೆ ಫೆಬ್ರವರಿ7ರಂದು ಬಜೆಟ್ ಪೂರ್ವಭಾವಿ ಸಭೆ ಕರೆಯಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದರು. ಆದರೆ ಅಂದು ಮುಖ್ಯಮಂತ್ರಿಗಳು ಹಲಿಗೆ ಹೋಗುತ್ತಿರುವ ಕಾರಣದಿಂದಾಗಿ ಬಜೆಟ್ ಪೂರ್ವಭಾವಿ ಸಭೆಯನ್ನು ಮುಂದೂಡಲಾಗಿದೆ. 

ಹಿಂದಿನ ಲೇಖನಕೋವಿಡ್-19: ದೇಶದಲ್ಲಿ 1,72,433 ಹೊಸ ಪ್ರಕರಣ
ಮುಂದಿನ ಲೇಖನಮಹಿಳೆಯ ಗರ್ಭಕೋಶದಲ್ಲಿತ್ತು 9.4 ಕೆಜಿ ಗೆಡ್ಡೆ