ಮನೆ ಕಾನೂನು ಶುಲ್ಕ ಸಂಗ್ರಹಿಸಿ, ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ಅನುಮತಿ ನೀಡಿ: ಹೈಕೋರ್ಟ್

ಶುಲ್ಕ ಸಂಗ್ರಹಿಸಿ, ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ಅನುಮತಿ ನೀಡಿ: ಹೈಕೋರ್ಟ್

0

ಬೆಂಗಳೂರು: ಮಾರ್ಚ್ 21, 2022 ರ ಮಾರ್ಗಸೂಚಿಗಳಿಗೆ ಅನುಗುಣವಾಗಿ ಎಂಟು ಅನುದಾನರಹಿತ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಪಡೆಯುವ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವಂತೆ ಕರ್ನಾಟಕ ಹೈಕೋರ್ಟ್ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಎಸ್‌ಎಸ್‌ಎಲ್‌ಸಿ ಮಂಡಳಿಯ ನಿರ್ದೇಶಕರಿಗೆ ನಿರ್ದೇಶನ ನೀಡಿ ಮಧ್ಯಂತರ ಆದೇಶ  ಹೊರಡಿಸಿದೆ.

ಮಾರ್ಚ್ 28 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದೆ, ಮಾನ್ಯತೆ ನವೀಕರಿಸಿಲ್ಲ ಎಂಬ ಕಾರಣ ನೀಡಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಎಸ್‌ಎಸ್‌ಎಲ್‌ಸಿ ಬೋರ್ಡ್‌ನ ಕ್ರಮ ಪ್ರಶ್ನಿಸಿ ವಿವೇಕನಗರದ ಶಾಂತಿ ನಿಕೇತನ ಪ್ರೌಢಶಾಲೆ ಹಾಗೂ ಈಜಿಪುರದ ಮಾಡರ್ನ್ ಎಜುಕೇಷನ್ ಸೊಸೈಟಿ ಸೇರಿದಂತೆ ಎಂಟು ಶಾಲೆಗಳು ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಪಿ ಭಟ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದಿಸಿ, ಅರ್ಜಿದಾರ ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆ ಅಡಿ ನೋಂದಣಿ ಮಾಡಿಕೊಂಡಿದ್ದು, ಸರ್ಕಾರದಿಂದ ಶಾಶ್ವತ ಮಾನ್ಯತೆ ಪಡೆದಿವೆ. ಇದೀಗ ಮಾನ್ಯತೆ ನವೀಕರಿಸಿಕೊಳ್ಳಲು ಹೇಳುತ್ತಿರುವ ಶಿಕ್ಷಣ ಇಲಾಖೆ ಮಾನ್ಯತೆ ನವೀಕರಿಸಿಕೊಳ್ಳದಿದ್ದರೆ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವುದಿಲ್ಲ ಎನ್ನುತ್ತಿದೆ ಎಂದು ತಿಳಿಸಿದರು.

ಅಲ್ಲದೆ, ವಿದ್ಯಾರ್ಥಿಗಳು ಎಸ್‌ಎಲ್‌ಎಲ್‌ಸಿ ಪರೀಕ್ಷಾ ಶುಲ್ಕ ಪಾವತಿಸಿದ್ದರೂ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಪ್ರವೇಶ ಪತ್ರ ತಡೆ ಹಿಡಿಯಲಾಗಿದೆ ಎಂದು ಇಲಾಖೆ ವೆಬ್ ಸೈಟ್​ನಲ್ಲಿ ತೋರಿಸುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಪರೀಕ್ಷೆಗೆ ಅನುಮತಿ ನೀಡದಿದ್ದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಅರ್ಜಿದಾರ ಶಾಲಾ ವಿದ್ಯಾರ್ಥಿಗಳಿಗೆ ಎಸ್‌ಎಲ್‌ಎಲ್‌ಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಆದೇಶಿಸುವಂತೆ ಕೋರಿದರು.

ಕರ್ನಾಟಕ ಶಿಕ್ಷಣ ಕಾಯ್ದೆ, 1983 ರ ಅಡಿಯಲ್ಲಿ ತಮ್ಮ ಶಾಲೆಗಳನ್ನು ನೋಂದಾಯಿಸಿದ ನಂತರ ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಗೆ ಬರುವ ಶಾಲೆಗೆ ಎಲ್‌ಕೆಜಿಯಿಂದ ಪ್ರೌಢಶಾಲೆಯವರೆಗೆ ಶಾಶ್ವತ ಮಾನ್ಯತೆ ನೀಡಲಾಗಿದೆ ಎಂದು ಅರ್ಜಿದಾರರು ವಾದಿಸಿದರು. ಬ್ಲಾಕ್ ಶಿಕ್ಷಣಾಧಿಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕಾಯಿದೆಯಡಿ ಅಗತ್ಯತೆಗಳನ್ನು ಪೂರೈಸಿದ್ದರೂ ಪದೇ ಪದೇ ಕಿರುಕುಳ ನೀಡುತ್ತಾರೆ ಎಂದು ಅವರು ಆರೋಪಿಸಿದರು.

ವಿಚಾರಣೆಯಲ್ಲಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿ ವರ್ಷ ತಮ್ಮ ಮಾನ್ಯತೆಯನ್ನು ನವೀಕರಿಸಬೇಕು ಎಂದು ಮೌಖಿಕವಾಗಿ ತಿಳಿಸಿದರು. ಕಾಯಿದೆಯಡಿ ಯಾವುದೇ ನಿರ್ದಿಷ್ಟ ನಿಬಂಧನೆಗಳಿಲ್ಲದೇ ಸೆಕ್ಷನ್ 39 ರ ಅಡಿಯಲ್ಲಿ ‘ಮಾನ್ಯತೆ ಹಿಂತೆಗೆದುಕೊಳ್ಳುವಿಕೆ’ ಕುರಿತು ಯೋಚಿಸಿ, ಅಧಿಕಾರಿಗಳು ಯಾವುದೇ ಕಾರಣವಿಲ್ಲದೆ ತಮ್ಮ ಶಾಲೆಯ ಮಕ್ಕಳ  ಪ್ರವೇಶ ಪತ್ರವನ್ನು ತಡೆಹಿಡಿಯುವಂತಿಲ್ಲ, ”ಎಂದು ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದಿಸಿದರು. 

ಹಿಂದಿನ ಲೇಖನಸ್ವಾಮೀಜಿಗಳ ಬಗ್ಗೆ ಗೌರವ ಇದೆ: ಸಿದ್ದರಾಮಯ್ಯ
ಮುಂದಿನ ಲೇಖನಚಾಮರಾಜನಗರ ನಗರಸಭೆ ಆಯುಕ್ತರಿಗೆ ನಿಂದನೆ: ಸದಸ್ಯನಿಗೆ 1 ವರ್ಷ ಜೈಲು