ರಚನೆ : ಶ್ರೀ ಕನಕದಾಸರು
ಬಂಟನಾಗಿ ಬಾಗಿಲ ಕಾಯುವೆ, ಶ್ರೀಹರಿಯ || ಪ ||
ವೈಕುಂಠದ ಸೋಂಪಿನ ದಾಸರ ಮನೆಯ ||ಅ.ಪ||
ಹೊರಸುತ್ತು ಪ್ರಾಕಾರ ಸುತ್ತಿ ನಾ ಬರುವೆ
ಬರುವ ಹೋಗುವರ ವಿಚಾರಿಸಿ ಬಿಡುವೆ
ಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ
ಶ್ರೀಹರಿಯ ಸಮುದ ಓಲಗದೊಳಿರುವೆ || ೧ ||
ತೊತ್ತು ತೊಂಡನಾಗಿ ಬಾಗಿಲ ಕಾಯ್ವೆ
ಚಿತ್ರದ ಚಾವಡಿ ರಜವನು ಬಳಿವೆ
ಮುತ್ತಿನ ರಂಗವಲ್ಲಿಯನಿಟ್ಟು ಬರೆವೆ
ರತ್ನಗಂಬಳಿ ಹೊತ್ತು ಹಾಸುವೆನು ||೨||
ವೇಳವೇಳೆಗೆ ನಾನೂಳಿಗವ ಮಾಡುವೆ
ಆಲವಟ್ಟಿಗೆ ಚಾಮರವ ಬೀಸುವೆ
ತಾಳದಂಡಿಗೆ ಭೃಂಗಿ ಮೇಳಗಳ ಕೂಡಿ
ಶ್ರೀಲೋಲನ ಕೊಂಡಾಡಿ ಪಾಡುವೆನು || ೩ ||
ಎಂಜಲ ಹರಿವಾಣಂಗಳ ಬೆಳಗುವೆ
ಕಂಜನಾಭನ ಪಾದಕಮಲವ ತೊಳೆವೆ
ರಂಜಿಪ ಕುಸುಮದ ಮಾಲೆ ತಂದಿಡುವೆ
ಸಂಜೆಗೆ ಪಂಜಿನ ದಾಸನಾಗಿರುವೆ ||೪||
ಮೀಸಲೂಳಿಗವ ನಾ ಮಾಡಿಕೊಂಡಿರುವೆ
ಶೇಷ ಪ್ರಸಾದವ ಉಂಡುಕೊಂಡಿರುವೆ
ಶೇಷಗಿರಿ ಕಾಗಿನೆಲೆಯಾದಿಕೇಶವನ
ದಾಸರ ದಾಸರ ದಾಸರ ಮನೆಯ ||೫||