ಮನೆ ಸುದ್ದಿ ಜಾಲ ಜೂನ್ ಹೊತ್ತಿಗೆ 4,500 ತರಗತಿಗಳ ಡಿಜಿಟಲೀಕರಣ ಸಂಪೂರ್ಣ: ಅಶ್ವತ್ಥನಾರಾಯಣ

ಜೂನ್ ಹೊತ್ತಿಗೆ 4,500 ತರಗತಿಗಳ ಡಿಜಿಟಲೀಕರಣ ಸಂಪೂರ್ಣ: ಅಶ್ವತ್ಥನಾರಾಯಣ

0

ಕಲಬುರಗಿ: ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಉನ್ನತ ಶಿಕ್ಷಣ ಕ್ಷೇತ್ರವನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಬಾಕಿ ಉಳಿದಿರುವ 4,500 ತರಗತಿಗಳ ಡಿಜಿಟಲೀಕರಣವನ್ನು ಜೂನ್ ಹೊತ್ತಿಗೆ ಮುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಇಲ್ಲಿನ ಬಾಲಕರ ವಸತಿ ನಿಲಯದ ಆವರಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ದಕ್ಷ ತಂತ್ರಾಂಶಗಳನ್ನು ಅಳವಡಿಸಿಕೊಂಡು ಉನ್ನತ ಮತ್ತು ತಾಂತ್ರಿಕ ಶಿಕ್ಷಣ ರಂಗಗಳಲ್ಲಿಉ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವಿರುವ ಶೈಕ್ಷಣಿಕ ಸಂಸ್ಕೃತಿಯನ್ನು ರೂಪಿಸಲಾಗುತ್ತಿದೆ. ಅಲ್ಲದೆ, ಶಿಕ್ಷಣ ಸಿಬ್ಬಂದಿ ಮತ್ತು ಬೋಧಕ ವೃಂದದ ನೇಮಕಾತಿ, ವೇತನ ಪಾವತಿ, ಬಡ್ತಿ ನೀಡುವಿಕೆ, ಬಾಕಿ ಭತ್ಯೆ ಪಾವತಿ ಇತ್ಯಾದಿಗಳಲ್ಲಿ ಹಿಂದಿನ ವರ್ಷಗಳಲ್ಲಿ ಇದ್ದ ಅಕ್ರಮಗಳನ್ನು ತೊಡೆದು ಹಾಕಲಾಗಿದೆ ಎಂದು ಅವರು ವಿವರಿಸಿದರು.

ಶಿಕ್ಷಣ ಕ್ಷೇತ್ರವು ಸಮಾಜದ ಸರ್ವಾಂಗೀಣ ಪ್ರಗತಿಗೆ ಅಡಿಪಾಯವಾಗಿದೆ. ಸರಕಾರವು ಕೂಡ ಇದಕ್ಕೆ ಉದಾರವಾಗಿ ಅನುದಾನ ನೀಡುತ್ತಿದೆ. ಒಟ್ಟಾರೆ ಸಮಾಜದಲ್ಲಿ ಶಿಕ್ಷಣ ಮತ್ತು ಬೋಧನಾ ವೃತ್ತಿಗೆ ಅಗ್ರಗಣ್ಯ ಸ್ಥಾನ ಇರಬೇಕು. ಮಕ್ಕಳು ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಸರಕಾರಿ ಕಾಲೇಜುಗಳಿಗೆ ತಾವಾಗಿಯೇ ಬರುವ ರೀತಿಯಲ್ಲಿ ಪ್ರಥಮ ದರ್ಜೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸಚಿವರು ನುಡಿದರು.

ಇಲ್ಲಿನ ಸರಕಾರಿ ಕಾಲೇಜು ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿರುವುದೇ ಇಲ್ಲಿರುವ ಅತ್ಯುತ್ತಮ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ತಕ್ಕಂತೆ, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಕೊಡಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಪ್ರವೇಶಾತಿಯಿಂದ ಹಿಡಿದು ಅಂಕಪಟ್ಟಿ ಪಡೆಯುವವರೆಗೆ ಎಲ್ಲವನ್ನೂ ಡಿಜಿಟಲೀಕರಣ ಮಾಡಲಾಗಿದೆ. ಎನ್ಇಪಿ ಪ್ರಕಾರ, ಬಹುಶಿಸ್ತೀಯ ಮಾದರಿಯ ಕಲಿಕೆಗೆ ಒತ್ತು ಕೊಡಲಾಗಿದೆ. ಸರಕಾರಿ ಕಾಲೇಜುಗಳಲ್ಲಿ ಇರುವಂತಹ ಅನುಕೂಲಗಳು ಖಾಸಗಿ ಸಂಸ್ಥೆಗಳಲ್ಲಿ ಕೂಡ ಇಲ್ಲ ಎಂದು ಅವರು ವಿಶ್ವಾಸದಿಂದ ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ದತ್ತಾತ್ರೇಯ ರೇವೂರ, ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಮುಂತಾದವರು ಇದ್ದರು.

ಹಿಂದಿನ ಲೇಖನಖೋಟಾ ನೋಟ ಜಾಲದ ಶಂಕೆ: ೪೦ ಲಕ್ಷಕ್ಕೆ ಒಂದು ಕೋಟಿ ಆಫರ್: ವಂಚನೆ
ಮುಂದಿನ ಲೇಖನಕೋರ್ಟ್ ಆದೇಶ ಪಾಲನೆಯಲ್ಲಿ ಆಗುವ ವಿಳಂಬಕ್ಕೆ ಇಲಾಖೆ ಮುಖ್ಯಸ್ಥರೆ ಹೊಣೆ: ರಾಜ್ಯ ಸರ್ಕಾರ ಆದೇಶ