ಮನೆ ರಾಜಕೀಯ ದಿ. ಮಾದೇಗೌಡರ ಬಗ್ಗೆ ಅವಹೇಳನ ಮಾಡಿರುವ ಶಿವರಾಮೇಗೌಡರನ್ನು ಪಕ್ಷದಿಂದ ಹೊರಹಾಕಲು ಹೆಚ್​​ಡಿಕೆ ಸೂಚನೆ

ದಿ. ಮಾದೇಗೌಡರ ಬಗ್ಗೆ ಅವಹೇಳನ ಮಾಡಿರುವ ಶಿವರಾಮೇಗೌಡರನ್ನು ಪಕ್ಷದಿಂದ ಹೊರಹಾಕಲು ಹೆಚ್​​ಡಿಕೆ ಸೂಚನೆ

0

ಬೆಂಗಳೂರು: ವೈರಲ್ ಆದ ಆಡಿಯೋದಲ್ಲಿ ಹಿರಿಯ ಮುತ್ಸದ್ಧಿ, ದಿವಂಗತ ಜಿ. ಮಾದೇಗೌಡರ ವಿರುದ್ಧ ಮಾತನಾಡಿರುವ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡರಿಗೆ ನೋಟಿಸ್ ಕೊಟ್ಟು ಪಕ್ಷದಿಂದ ಹೊರ ಹಾಕುವಂತೆ ಪಕ್ಷದ ಅಧ್ಯಕ್ಷರಿಗೆ ಸೂಚನೆ ಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂತಹವರು ಪಕ್ಷದಲ್ಲಿ ಇದ್ದರೆ ಶೋಭೆ ತೋರುವುದಿಲ್ಲ ಎಂದು ಗರಂ ಆಗಿದ್ದಾರೆ.

ಮಾಧ್ಯಮಗಳಲ್ಲಿ ನಿನ್ನೆ ಆಡಿಯೋವೊಂದನ್ನು ನೋಡಿದ್ದೇನೆ, ಶಿವರಾಮೇಗೌಡರ ದೂರವಾಣಿ ರೆಕಾರ್ಡ್ ವೈರಲ್ ಆಗಿದೆ. ಸಂಬಂಧ ಇಲ್ಲದೇ ಇರುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿ ದಿ.ಮಾದೇಗೌಡರ ಬಗ್ಗೆ ಮಾತನಾಡಿದ್ದಾರೆ. ನಮಗೆ, ಅವರಿಗೆ ರಾಜಕೀಯ ಬೇರೆ, ಮಾದೇಗೌಡರು ಈಗ ಇಲ್ಲ. ಆದರೆ, ಅವರ ಹೆಸರು ಯಾಕೆ ಎಳೆದು ತಂದಿದ್ದಾರೋ ಗೊತ್ತಿಲ್ಲ. ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಸಂಬಂಧ ನಮ್ಮ ಅಧ್ಯಕ್ಷರಿಗೆ ಸೂಚನೆ ಕೊಡುತ್ತೇನೆ. ನೋಟಿಸ್ ಕೊಟ್ಟು ಪಕ್ಷದಿಂದ ಹೊರ ಹಾಕಲು ಸೂಚಿಸುತ್ತೇನೆ ಎಂದು ಹೇಳಿದರು.

ಇವರೊಬ್ಬರೇನಾ ಹಣ ಕಂಡಿರುವುದು. ಲೋಕಸಭಾ ಚುನಾವಣೆಯಲ್ಲಿ ಸುಮಾರು 30 ಕೋಟಿ ರೂ. ಖರ್ಚು ಮಾಡಿರುವುದನ್ನು ಹೇಳಿದ್ದಾರೆ. ಅದ್ಯಾರಿಗೆ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ ಎಂದ ಅವರು, ಮಾದೇಗೌಡರ ಬಗ್ಗೆ ಮಾತನಾಡಿದ್ದು ಸರಿಯಲ್ಲ. ಅವರು ಈಗ ನಮ್ಮ ಮುಂದೆ ಇಲ್ಲ. ಇಲ್ಲದ ಸಮಯದಲ್ಲಿ ಶಿವರಾಮೇಗೌಡರು ಈ ರೀತಿ ಪದಬಳಕೆ ಮಾಡಿರೋದು ಸರಿಯಲ್ಲ. ಒಂದು ಇತಿ ಮಿತಿ ಇದೆ. ಇಲ್ಲಿಯವರೆಗ ತಿದ್ದಿಕೊಳ್ಳುತ್ತಾರೆ ಅಂದುಕೊಂಡು ಸುಮ್ಮನಿದ್ದೆವು. ಆದರೆ ಅದು ಆಗಲಿಲ್ಲ ಎಂದು ಬೇಸರ ಹೊರಹಾಕಿದರು.

ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಕೈ ತೊರೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಅವರು ಈಗಾಗಲೇ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಬಿಟ್ಟಿದ್ದೇನೆ ಎಂದಿದ್ದಾರೆ. ಹುಬ್ಬಳ್ಳಿಯಲ್ಲಿ ನಿನ್ನೆ ಅವರು ಮಾತಾಡಿದ್ದಾರೆ. ನೋಡೋಣ ಏನಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಉತ್ತರ ಪ್ರದೇಶ, ಗೋವಾ, ಪಂಜಾಬ್ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ ಒಂದು ಪಕ್ಷದಲ್ಲಿ ಇರುತ್ತಾರೆ. ಸಂಜೆ ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ. ಇಂದು ರಾಜಕೀಯ ನಾಯಕರಲ್ಲಿ ನಿಷ್ಠೆ ಎಂಬುದೇ ಇಲ್ಲ. ಇಂಥವರು ಇಂಥಹದ್ದೇ ಪಕ್ಷದಲ್ಲಿ ಇರುತ್ತಾರೆಂಬುದು ಊಹೆ ಮಾಡುವುದೂ ಕಷ್ಟ. ಏನಾಗುತ್ತದೆ ಎಂದು ಚುನಾವಣೆ ಸಮಯದಲ್ಲಿ ನೋಡೋಣ ಎಂದು ತಿಳಿಸಿದರು.

ಹಿಂದಿನ ಲೇಖನಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಮಾರಮಾರಿ:  ಲಾಠಿ ಪ್ರಹಾರದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯ
ಮುಂದಿನ ಲೇಖನಕುತೂಹಲಕ್ಕೆ ಕಾರಣವಾದ ಡಿಕೆಶಿ- ಸಚಿವ ಆನಂದ್ ಸಿಂಗ್ ಭೇಟಿ