ಮನೆ ಕಾನೂನು ಸಕ್ಷಮ ಪ್ರಾಧಿಕಾರ ಆರು ತಿಂಗಳಲ್ಲಿ ತೀರ್ಮಾನಿಸದಿದ್ದರೆ ಅದು ಭ್ರಷ್ಟಾಚಾರ ಆರೋಪವಾದರೂ ರದ್ದು: ಹೈಕೋರ್ಟ್

ಸಕ್ಷಮ ಪ್ರಾಧಿಕಾರ ಆರು ತಿಂಗಳಲ್ಲಿ ತೀರ್ಮಾನಿಸದಿದ್ದರೆ ಅದು ಭ್ರಷ್ಟಾಚಾರ ಆರೋಪವಾದರೂ ರದ್ದು: ಹೈಕೋರ್ಟ್

0

ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಹಾಸನದ ಅರಕಲಗೂಡು ತಾಲ್ಲೂಕು ಪಂಚಾಯಿತಿ ಮಾಜಿ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರ ವಿರುದ್ಧದ ಪ್ರಕರಣಗಳನ್ನು ವಿಚಾರಣೆಗೆ ಪರಿಗಣಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ. ಅಲ್ಲದೇ, ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ತನಿಖಾ ಸಂಸ್ಥೆ ಸಲ್ಲಿಸುವ ಮನವಿಯನ್ನು ಸಕ್ಷಮ ಪ್ರಾಧಿಕಾರ ಆರು ತಿಂಗಳಲ್ಲಿ ತೀರ್ಮಾನಿಸದಿದ್ದರೆ ಅದು ಭ್ರಷ್ಟಾಚಾರ ಆರೋಪವಾದರೂ ರದ್ದುಪಡಿಸಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ತಮ್ಮ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಂಜ್ಞೇಯ ತೆಗೆದುಕೊಂಡಿರುವ ಕ್ರಮ ಪ್ರಶ್ನಿಸಿ ಅರಕಲಗೂಡಿನ ತಾಲ್ಲೂಕು ಪಂಚಾಯಿತಿಯ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಎಂ ಎಸ್ ಫನೀಶ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ತನಿಖಾಧಿಕಾರಿಗಳು ಸಲ್ಲಿಸುವ ಮನವಿಯನ್ನು ಆರು ತಿಂಗಳಲ್ಲಿ ಪರಿಗಣಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯಾಗಿರುವ ಅರ್ಜಿದಾರರ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಸಂಜ್ಞೇಯ ಪರಿಗಣಿಸಲಾಗಿದೆ.  ಅಧಿಕಾರಿಗಳ ವಿರುದ್ಧದ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಅನುಮತಿ ಕೇಳಿ ಸಲ್ಲಿಸುವ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರಗಳು ತಿಂಗಳುಗಟ್ಟಲೇ ಕಡತ ಬಾಕಿ ಉಳಿಸಿಕೊಳ್ಳುವಂತಿಲ್ಲ. ಅಲ್ಲದೇ, ಈ ರೀತಿಯ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಸೂಕ್ತ ರೀತಿಯಲ್ಲಿ ಎದುರಿಸುವ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಇರುವುದು ಸಹ ಒಂದು ನಿರ್ಧಾರವೇ ಆಗಿದೆ” ಎಂದು ಪೀಠ ಬೇಸರಿಸಿದೆ.

“ಪ್ರಕರಣ ರದ್ದು ಪಡಿಸದಂತೆ ಸರ್ಕಾರ ತನ್ನ ವಕೀಲರ ಮೂಲಕ ನ್ಯಾಯಾಲಯದಲ್ಲಿ ತೀವ್ರ ವಿರೋಧ ದಾಖಲಿಸುತ್ತದೆ. ಅದಕ್ಕೆ ಬದಲಾಗಿ ಪ್ರಾಧಿಕಾರವು ಅಂತಹ ಮಂಜೂರಾತಿಗಾಗಿ ಸಲ್ಲಿಸುವ ಮನವಿಗಳನ್ನು ನಿರಾಕರಿಸುವುದು ಅಥವಾ ಅನುಮತಿಸುವುದು ಮುಖ್ಯ” ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.

“ಇಂದು ಸಮಾಜಕ್ಕೆ ಮಾರಕವಾಗಿರುವ ಭ್ರಷ್ಟಾಚಾರವನ್ನು ತೊಲಗಿಸಬೇಕಾದರೆ ಅದರಲ್ಲೂ ಭ್ರಷ್ಟಾಚಾರ ಅಥವಾ ಅಧಿಕೃತ ಕರ್ತವ್ಯ ನಿಭಾಯಿಸಲು ಸರ್ಕಾರಿ ಅಧಿಕಾರಿಯ ವಿರುದ್ಧ ತುರ್ತಾಗಿ ಕ್ರಮಕೈಗೊಳ್ಳುವ ಮೂಲಕ ಸರ್ಕಾರವು ತನ್ನ ಉದ್ದೇಶವನ್ನು ತೋರ್ಪಡಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಅರಕಲಗೂಡು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ ಎಸ್ ಫನೀಶ ಅವರು ಪ್ರಸ್ತುತ ಹಾಸನದ ತಾವರದೇವರಕೊಪ್ಪಲುವಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದಲ್ಲಿ ಹಿರಿಯ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2009-10 ರಲ್ಲಿ ಅರಕಲಗೂಡಿನ ತಾಲ್ಲೂಕು ಪಂಚಾಯಿತಿಯ ಕಾರ್ಯನಿವಾಹಣಾಧಿಕಾರಿಯಾಗಿದ್ದಾಗ ಇಲಾಖೆಗಳಿಂದ ಅನುಮತಿ ಪಡೆಯದೆ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದರು. ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟು ಮಾಡಲಾಗಿತ್ತು ಎಂದು ಅರ್ಜಿದಾರರ ವಿರುದ್ಧ 2010ರಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಐದು ವರ್ಷಗಳ ನಂತರ ತನಿಖಾಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದರು.

ಈ ನಡುವೆ ಅರ್ಜಿದಾರರ ವಿರುದ್ಧ ಇಲಾಖಾ ವಿಚಾರಣೆಯೂ ನಡೆದು ಆರೋಪಗಳು ಸಾಬೀತಾಗಿಲ್ಲ ಮತ್ತು ರಾಜ್ಯದ ಬೊಕ್ಕಸಕ್ಕೆ ಯಾವುದೇ ನಷ್ಟ ಉಂಟಾಗಿಲ್ಲ ಎಂದು ಅಧಿಕಾರಿಗಳು 2020ರಲ್ಲಿ ವರದಿ ನೀಡಿದ್ದರು. ಇದರ ಆಧಾರದಲ್ಲಿ ಪ್ರಕರಣ ರದ್ದು ಮಾಡುವಂತೆ ಕೋರಿ ಅವರು ಹೈಕೋರ್ಟ್ ನಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಹಿಂದಿನ ಲೇಖನಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹರಿದ ಕಾಂಗ್ರೆಸ್ ಶಾಸಕನಿಗೆ ದಂಡ
ಮುಂದಿನ ಲೇಖನರಾಜಕೀಯ ಪ್ರಚಾರಕ್ಕಾಗಿ ದೇಶಪ್ರೇಮಿಗಳ ಹೆಸರು ಬಳಸುವುದು ತಪ್ಪು: ರಂಜಿತ್‌ ಸಾವರ್ಕರ್‌