ಮನೆ ಅಪರಾಧ ನೇಣು ಬಿಗಿದ ಸ್ಥಿತಿಯಲ್ಲಿ ಪತ್ರಕರ್ತೆ ಶವ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಪತ್ರಕರ್ತೆ ಶವ ಪತ್ತೆ

0

ಬೆಂಗಳೂರು: ರಾಯಿಟರ್ಸ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತೆ ಶ್ರುತಿ (35) ಎಂಬುವರ ದೇಹವು ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪತಿ ಅನೀಶ್‌ ಕೊಯಾಡನ್‌ ಕೊಲೆ ಮಾಡಿರುವುದಾಗಿ ಆಕೆಯ ಕುಟುಂಬದವರು ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

‘2017ರಲ್ಲಿ ಶ್ರುತಿ ಹಾಗೂ ಅನೀಶ್‌ ವಿವಾಹವಾಗಿತ್ತು. ಬೆಂಗಳೂರಿಗೆ ಮರಳಿದ್ದ ದಂಪತಿ ವೈಟ್‌ಫೀಲ್ಡ್‌ನ ನಲ್ಲೂರುಹಳ್ಳಿ ರಸ್ತೆ ಬಳಿಯ ಎಸ್‌.ವಿ.ಮೈಪೇರ್‌ ವಸತಿ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ವಾಸವಿತ್ತು. ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಅನೀಶ್‌, ಪ್ರತಿನಿತ್ಯ ಶ್ರುತಿಗೆ ಚಿತ್ರಹಿಂಸೆ ನೀಡುತ್ತಿದ್ದ. ಸಂಬಳದ ಹಣವನ್ನೆಲ್ಲಾ ತವರು ಮನೆಗೆ ನೀಡುತ್ತೀಯಾ ಎಂದು ಹೇಳಿ ಹಲ್ಲೆ ನಡೆಸುತ್ತಿದ್ದ. ಒಮ್ಮೊಮ್ಮೆ ಮದ್ಯಪಾನ ಮಾಡಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಮನೆಯಲ್ಲಿ ಹಿಡನ್‌ ಕ್ಯಾಮೆರಾ ಇಟ್ಟು ಆಕೆಯ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದ. ಆಕೆ ಮಾತನಾಡುತ್ತಿದುದ್ದನ್ನೆಲ್ಲಾ ರೆಕಾರ್ಡ್‌ ಮಾಡುತ್ತಿದ್ದ. ಈ ವರ್ಷದ ಜನವರಿ 15ರಂದು ಹೆಂಡತಿ ಜೊತೆ ಜಗಳ ಮಾಡಿ ಕೊಲೆಗೆ ಯತ್ನಿಸಿದ್ದ. ಆಕೆಯ ಚೀರಾಟ ಕೇಳಿ ಓಡಿ ಬಂದಿದ್ದ ಭದ್ರತಾ ಸಿಬ್ಬಂದಿ ಪ್ರಾಣ ಉಳಿಸಿದ್ದರು ಎಂದು ಶ್ರುತಿ ಸಹೋದರ ನಿಶಾಂತ್‌ ನಾರಾಯಣನ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ಎಂದು ಪೊಲೀಸರು ಹೇಳಿದ್ದಾರೆ.

‘ನನ್ನ ಪತ್ನಿ ಇದೇ 20 ಮತ್ತು 21ರಂದು ಶ್ರುತಿಗೆ ಸತತವಾಗಿ ಕರೆ ಮಾಡಿದ್ದಳು. ಆಕೆ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ 22ರ ಬೆಳಿಗ್ಗೆ ಆಕೆಯ ಅಪಾರ್ಟ್‌ಮೆಂಟ್‌ಗೆ ಹೋಗಿದ್ದೆವು. ಮನೆಯ ಬೀಗ ಹಾಕಿತ್ತು. ಕಿಟಕಿಯಿಂದ ಇಣುಕಿ ನೋಡಿದಾಗ ಒಳಗೆ ಯಾರೂ ಕಾಣಲಿಲ್ಲ. ಭದ್ರತಾ ಸಿಬ್ಬಂದಿ ನೆರವಿನಿಂದ ಬಾಲ್ಕನಿಯ ಬಾಗಿಲು ಮುರಿದು ಒಳಗೆ ಹೋದಾಗ ಮಲಗುವ ಕೋಣೆಯಲ್ಲಿ ಶ್ರುತಿಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಗಂಡನೇ ಆಕೆಯನ್ನು ಕೊಲೆ ಮಾಡಿರುವ ಶಂಕೆ ಇದೆ ಎಂದೂ ನಿಶಾಂತ್‌ ದೂರಿನಲ್ಲಿ ತಿಳಿಸಿದ್ದಾರೆ’ ಎಂದೂ ವಿವರಿಸಿದ್ದಾರೆ.

ಹಿಂದಿನ ಲೇಖನಬೈಕ್ ಗೆ ಖಾಸಗಿ ಬಸ್ ಢಿಕ್ಕಿ: ಒಂದೇ ಕುಟುಂಬದ ನಾಲ್ವರ ಸಾವು
ಮುಂದಿನ ಲೇಖನವಿಚ್ಛೇದನಕ್ಕಾಗಿ ಪತ್ನಿ ಪ್ರತ್ಯೇಕ ಮನೆ, ಪೋಷಕರ ಮನೆಗೆ ಭೇಟಿ ನೀಡುವುದು ಕ್ರೌರ್ಯವಲ್ಲ: ಹೈಕೋರ್ಟ್