ಮನೆ ಅಪರಾಧ ದಲಿತ ಯುವಕನ ಹತ್ಯೆ: ಇಬ್ಬರ ಬಂಧನ

ದಲಿತ ಯುವಕನ ಹತ್ಯೆ: ಇಬ್ಬರ ಬಂಧನ

0

ಕಲಬುರಗಿ(Kalburgi): ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದ ಭೀಮನಗರದ ನಿವಾಸಿ ವಿಜಯಕುಮಾರ್ ಕಾಂಬಳೆ (25) ಎಂಬ ದಲಿತ ಯುವಕನ ಹತ್ಯೆ ಮಾಡಿದ ‌ಆರೋಪದ‌ ಮೇರೆಗೆ ವಾಡಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ವಾಡಿ ಪಟ್ಟಣದ ಮರಾಠಿ ಗಲ್ಲಿ ನಿವಾಸಿ ಮೊಹಮ್ಮದ್‌ ಶಹಾಬುದ್ದೀನ್ ಹಾಗೂ ನವಾಜ್ ಬಂಧಿತರು. ವಿಜಯಕುಮಾರ್ ಹಾಗೂ ಶಹಾಬುದ್ದೀನ್‌ನ ತಂಗಿ‌ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಈ ಬಗ್ಗೆ ಶಹಾಬುದ್ದೀನ್ ತಕರಾರು ತೆಗೆದು ಒಂಬತ್ತು ‌ತಿಂಗಳ ಹಿಂದೆ ವಿಜಯಕುಮಾರ್ ‌ಮೇಲೆ ಹಲ್ಲೆ ಮಾಡಿದ್ದ. ಆ ನಂತರವೂ ಮೊಬೈಲ್‌ನಲ್ಲಿ ಪ್ರೇಮಿಗಳು ಚಾಟಿಂಗ್ ಮಾಡುವುದು ಹಾಗೂ ಭೇಟಿಯಾಗುವುದನ್ನು ಮುಂದುವರಿಸಿದ್ದ ಹಿನ್ನೆಲೆಯಲ್ಲಿ ತನ್ನ ಸ್ನೇಹಿತ ನವಾಜ್ ನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ‌ತಿಳಿಸಿದ್ದಾರೆ.

ಹತ್ಯೆ ಮಾಡುವುದಕ್ಕೂ ಮುನ್ನ ಶಹಾಬುದ್ದೀನ್ ವಿಜಯಕುಮಾರ್‌ಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದ. ಆದರೆ, ಈ ಎಚ್ಚರಿಕೆಯನ್ನು ಕಡೆಗಣಿಸಿದ್ದೇ ಮುಳುವಾಯಿತು ಎಂದು ತಿಳಿದು ಬಂದಿದೆ.

ಪೊಲೀಸರು ಕೊಲೆ ಹಾಗೂ ಜಾತಿನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಮೃತ ವಿಜಯಕುಮಾರ್ ಕಾಂಬಳೆ ಅವರ ತಾಯಿ ರಾಜೇಶ್ವರಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ರಾಜೇಶ್ವರಿ ಅವರು ಪ್ರಿಯಾಂಕ್ ಅವರ ಕಾಲಿಗೆರಗಿ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕಣ್ಣೀರಿಟ್ಟರು.

ಹಿಂದಿನ ಲೇಖನಪಿಎಸ್ಐ ಅಕ್ರಮ ನೇಮಕಾತಿ ಹಗರಣ: ನ್ಯಾಯಾಂಗ ತನಿಖೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ
ಮುಂದಿನ ಲೇಖನಪರಿಷತ್‌ ಚುನಾವಣೆ: 7 ಅಭ್ಯರ್ಥಿಗಳು ಅವಿರೋಧ ಆಯ್ಕೆ