ಮನೆ ಕಾನೂನು ಪೌರ ಕಾರ್ಮಿಕರ ಸೇವೆ ಕಾಯಂ: ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆ

ಪೌರ ಕಾರ್ಮಿಕರ ಸೇವೆ ಕಾಯಂ: ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆ

0

ತುಮಕೂರು ನಗರ ಪಾಲಿಕೆಯಲ್ಲಿ ದಿನಗೂಲಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ 250 ಪೌರಕಾರ್ಮಿಕರ ಸೇವೆ ಕಾಯಂಗೊಳಿಸಲು ಕರ್ನಾಟಕ ಹೈಕೋರ್ಟ್ ನ ಏಕಸದಸ್ಯಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ಸೋಮವಾರ ತಡೆಯಾಜ್ಞೆ ನೀಡಿದೆ.

Join Our Whatsapp Group

ತುಮಕೂರು ನಗರ ಪಾಲಿಕೆ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಲಯವು ತುಮಕೂರು ಪೌರ ಕಾರ್ಮಿಕರ ಸಂಘ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ. ಅಲ್ಲದೆ, ಏಕಸದಸ್ಯಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿರುವಂತೆ ತುಮಕೂರಿನಲ್ಲಿ 3.55 ಲಕ್ಷ ಜನರಿದ್ದು, 507 ಪೌರ ಕಾರ್ಮಿಕರ ಅಗತ್ಯವಿದೆ. ಆದರೆ ಸರ್ಕಾರ 254 ಹುದ್ದೆಗಳಿಗೆ ಮಂಜೂರು ಮಾಡಿದ್ದರೆ, ಕೇವಲ 117 ಪೌರಕಾರ್ಮಿಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ, ಈ ಮೇಲ್ಮನವಿ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ಈ ಬಗ್ಗೆ ಸಮಗ್ರ ಮಾಹಿತಿ ಒದಗಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ಇದೇ ವೇಳೆ ಮುಂದಿನ ಆದೇಶದವರೆಗೆ ಏಕಸದಸ್ಯ ಪೀಠದ ಆದೇಶಕ್ಕೆ ನ್ಯಾಯಾಲಯ ಮಧ್ಯಂತರ ತಡೆ ನೀಡಿತು. ತುಮಕೂರು ನಗರ ಪಾಲಿಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ಕಳೆದ ಡಿಸೆಂಬರ್ನಲ್ಲಿ ಮುಂದಿನ ಮೂರು ತಿಂಗಳಲ್ಲಿ ತುಮಕೂರು ನಗರ ಪಾಲಿಕೆಯು (ಹಿಂದಿನ ನಗರಸಭೆ) 250 ಪೌರ ಕಾರ್ಮಿಕರ ಸೇವೆಯನ್ನು ಅವರು ಕೆಲಸಕ್ಕೆ ಸೇರಿದ ದಿನಾಂಕದಿಂದ ಪೂರ್ವಾನ್ವಯವಾಗುವಂತೆ ಕಾಯಂಗೊಳಿಸಬೇಕು. ಅವರ ಕೆಲಸಕ್ಕೆ ಸಮಾನ ವೇತನ ಹಾಗೂ ಹಿಂಬಾಕಿ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಆ ಮೂಲಕ ಕಳೆದ 20 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಸಮರಕ್ಕೆ ಅಂತ್ಯ ಹಾಡಿತ್ತು. 

ಪ್ರಕರಣದ ಹಿನ್ನೆಲೆ: 2002ರ ವೇಳೆಗೆ ತುಮಕೂರು ನಗರಸಭೆಯಲ್ಲಿ 250 ಪೌರ ಕಾರ್ಮಿಕರು ದಿನಕೂಲಿ ಆಧಾರದಲ್ಲಿ ದುಡಿಯುತ್ತಿದ್ದರು. ಸೇವೆ ಕಾಯಂಗೊಳಿಸಲು ಕೋರಿ ನಗರಸಭೆ ಪೌರ ಕಾರ್ಮಿಕರ ಸಂಘ ಸಲ್ಲಿಸಿದ್ದ ಮನವಿಯನ್ನು ಸರ್ಕಾರ 2002ರ ನವೆಂಬರ್ ನಲ್ಲಿ ಕೈಗಾರಿಕಾ ನ್ಯಾಯ ಮಂಡಳಿಗೆ ಶಿಫಾರಸ್ಸು ಮಾಡಿತ್ತು.

ಮೊದಲಿಗೆ ಪೌರಕಾರ್ಮಿಕರು ಸೇವೆ ಕಾಯಂಗೆ ಅರ್ಹರಲ್ಲ ಎಂದು ನ್ಯಾಯ ಮಂಡಳಿಯು 2006ರ ಜುಲೈ 4ರಂದು ಆದೇಶಿಸಿತ್ತು. ಆ ಆದೇಶ ಪ್ರಶ್ನಿಸಿ ಪೌರಕಾರ್ಮಿಕರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಏಕ ಸದಸ್ಯಪೀಠ 2009ರಲ್ಲಿ ವಜಾಗೊಳಿಸಿತ್ತು. ಆದರೆ, ಸಂಘದ ಮೇಲ್ಮನವಿಯನ್ನು ಪರಿಗಣಿಸಿದ್ದ ವಿಭಾಗೀಯ ಪೀಠವು ಪ್ರಕರಣವನ್ನು ಮತ್ತೆ ಪರಿಶೀಲಿಸುವಂತೆ ನ್ಯಾಯ ಮಂಡಳಿಗೆ ನಿರ್ದೇಶಿಸಿತ್ತು.

ಮತ್ತೆ ಹೊಸದಾಗಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯ ಮಂಡಳಿಯು 2017ರ ಸೆಪ್ಟೆಂಬರ್ 26ರಂದು ದಿನಗೂಲಿ ನೌಕರರ ಸೇವೆ ಕಾಯಂಗೊಳಿಸದೆ ಕೆಲಸ ಮಾಡಿಸಿಕೊಳ್ಳುತ್ತಿರುವುದು, ಸಮಾನ ಕೆಲಸಕ್ಕೆ ಸಮಾನ ವೇತನ ಪಾವತಿಸದಿರುವುದು, ಪೌರ ಕಾರ್ಮಿಕರಿಗೆ ಪ್ರತಿ ವರ್ಷ ಸಮವಸ್ತ್ರ, ಪಾದರಕ್ಷೆ, ಸುರಕ್ಷಿತ ಕವಚ ನೀಡದಿರುವುದು ನ್ಯಾಯಸಮ್ಮತವಲ್ಲ. ಆದ್ದರಿಂದ, ಅವರನ್ನು ನೌಕರಿಗೆ ಸೇರಿದ ದಿನದಿಂದ ಪೂರ್ವಾನ್ವಯವಾಗುವಂತೆ ಕಾಯಂಗೊಳಿಸಬೇಕು ಎಂದು ಆದೇಶ ನೀಡಿತ್ತು. ಅದರ ವಿರುದ್ಧ ಪಾಲಿಕೆ ಮೇಲ್ಮನವಿ ಸಲ್ಲಿಸಿದೆ.

ಹಿಂದಿನ ಲೇಖನಲಖನೌ: ಕಾರಿನ ಮೇಲೆ ಜಾಹೀರಾತು ಫಲಕ ಬಿದ್ದು ತಾಯಿ-ಮಗಳು ಸಾವು
ಮುಂದಿನ ಲೇಖನಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್