ಮನೆ ಕಾನೂನು ಪ್ರತ್ಯೇಕ ಪೋಕ್ಸೊ ಪ್ರಕರಣ: ಇಬ್ಬರು ಆರೋಪಿಗಳಿಗೆ 25 ವರ್ಷ ಜೈಲು, 15.10 ಲಕ್ಷ ರೂ. ದಂಡ

ಪ್ರತ್ಯೇಕ ಪೋಕ್ಸೊ ಪ್ರಕರಣ: ಇಬ್ಬರು ಆರೋಪಿಗಳಿಗೆ 25 ವರ್ಷ ಜೈಲು, 15.10 ಲಕ್ಷ ರೂ. ದಂಡ

0

ಗದಗ: ಜಿಲ್ಲೆಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಪೋಕ್ಸೊ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಕಾರಣ ಇಬ್ಬರಿಗೂ 25 ವರ್ಷ ಜೈಲು ಶಿಕ್ಷೆ ಹಾಗೂ ಸಂತ್ರಸ್ತೆಯರಿಗೆ ಒಟ್ಟು ₹15.10 ಲಕ್ಷ ಪರಿಹಾರ ನೀಡುವಂತೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2019ರಲ್ಲಿ ವೆಂಕಟೇಶ ದೊಡ್ಡಶಿವಪ್ಪ ಶಾವಿ ಎಂಬ ವ್ಯಕ್ತಿ ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣೇಶನನ್ನು ನೋಡಲು ಹೊರಟಿದ್ದ 12 ವರ್ಷದ ಬಾಲಕಿಗೆ ₹20 ಹಣದ ಆಮಿಷವೊಡ್ಡಿ, ಆಕೆಯನ್ನು ಪಾಳುಬಿದ್ದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು.

ಆಗ ಸಿಪಿಐ ಆಗಿದ್ದ ವೆಂಕಟೇಶ ಯಡಹಳ್ಳಿ 2019 ಅ.25ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 25 ವರ್ಷ ಜೈಲು, ₹1 ಲಕ್ಷ ದಂಡ ವಿಧಿಸಿ ಆದೇಶಿಸಿದೆ. ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಬಾಲಕಿಯ ಪುನರ್ವಸತಿ, ವೈದ್ಯಕೀಯ ಹಾಗೂ ಶೈಕ್ಷಣಿಕ ವೆಚ್ಚಕ್ಕಾಗಿ ₹7 ಲಕ್ಷ ಪರಿಹಾರವಾಗಿ ನ್ಯಾಷನಲ್ ಲೀಗಲ್ ಸರ್ವಿಸ್ ಅಥಾರಿಟಿ (ಎನ್‌ಎಎಲ್‌ಎಲ್‌ಎ) ನೀಡಬೇಕು ಎಂದು ರಾಜೇಶ್ವರಿ ಶೆಟ್ಟಿ ಅವರು ಆದೇಶ ಹೊರಡಿಸಿದ್ದಾರೆ.

ಅದೇ ರೀತಿಯಾಗಿ, ಬೆಟಗೇರಿ ಸಮೀಪದ ನಾಗಸಮುದ್ರ ಗ್ರಾಮದಲ್ಲಿ 2019ರಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗೂ 25 ವರ್ಷ ಜೈಲು ಹಾಗೂ ಸಂತ್ರಸ್ತ ಬಾಲಕಿಗೆ ₹1.10 ಲಕ್ಷ ದಂಡವಾಗಿ ಪಾವತಿಸುವಂತೆ ತೀರ್ಪು ನೀಡಿದೆ.

ಬೆಟಗೇರಿ ಸಮೀಪದ ನಾಗಸಮುದ್ರ ಗ್ರಾಮದಲ್ಲಿ ಮಲ್ಲಯ್ಯ ಮಾದರ ಎನ್ನುವ ವ್ಯಕ್ತಿ, ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ. ನೋಟ್‌ಬುಕ್ ಖರೀದಿಸಲು ಹೊರಟಿದ್ದ ಮಗುವನ್ನು ಪುಸಲಾಯಿಸಿ, ತಾನೇ ನೋಟ್ ಪುಸ್ತಕ ಖರೀದಿಸಿ ಕೊಡುವುದಾಗಿ ನಂಬಿಸಿ ಕರೆದೊಯ್ದು ಅತ್ಯಾಚಾರ ನಡೆಸಿದ್ದ.

ಈ ಕರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಅಂದಿನ ಸಿಪಿಐ ವೆಂಕಟೇಶ ಯಡಹಳ್ಳಿ ಅವರು 2019 ಜನವರಿ 7ರಂದು ನ್ಯಾಯಾಲಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಮಲ್ಲಯ್ಯನಿಗೆ 25 ವರ್ಷ ಜೈಲು, ₹1.10 ಲಕ್ಷ ಹಣವನ್ನು ಬಾಲಕಿಗೆ ದಂಡವಾಗಿ ಪಾವತಿಸಲು ಆದೇಶಿಸಿದೆ.

ಅಲ್ಲದೇ ಸಂತ್ರಸ್ತ ಬಾಲಕಿಯ ಪುನರ್ವಸತಿ, ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚವಾಗಿ ನ್ಯಾಷನಲ್ ಲೀಗಲ್ ಸರ್ವಿಸ್ ಅಥಾರಿಟಿ ₹6 ಲಕ್ಷ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಈ ಎರಡು ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಅಮರೇಶ ಹಿರೇಮಠ ವಾದ ಮಂಡಿಸಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಿಂದಿನ ಲೇಖನಬಂಡೀಪುರ ನಿಷೇಧಿತ ಪ್ರದೇಶದಲ್ಲಿ ಮದ್ಯಪಾನ ಮೋಜು ಮಸ್ತಿ
ಮುಂದಿನ ಲೇಖನಸುಳೇಭಾವಿ ಜೋಡಿ ಕೊಲೆ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ