ಮನೆ ಪ್ರವಾಸ ಇವು ಕರ್ನಾಟಕದ ಅಪರೂಪದ ತಾಣಗಳು

ಇವು ಕರ್ನಾಟಕದ ಅಪರೂಪದ ತಾಣಗಳು

0

ನಮ್ಮ ಕರ್ನಾಟಕದ ಪ್ರವಾಸವನ್ನು ಪ್ರತಿಯೊಬ್ಬ ಪ್ರವಾಸಿಗನ್ನು ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾಡಲೇಬೇಕು. ಇಲ್ಲಿನ ಕಣ್ಮನ ಸೆಳೆಯುವ ಪ್ರವಾಸಿ ಸೊಬಗುಗಳನ್ನು ನೋಡಿಯೇ ಅನುಭವಿಸಬೇಕು. ಒಂದೊಂದು ತಾಣವು ಮಂತ್ರಮುಗ್ಧಗೊಳಿಸುವಂತೆ ಇವೆ.

ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ನಮ್ಮ ಕರ್ನಾಟಕದ ಹಂಪಿ, ಮೈಸೂರು, ಚಿಕ್ಕಮಗಳೂರು, ಬಾದಾಮಿ-ಐಹೊಳೆ, ಕೂರ್ಗ್, ಬೆಂಗಳೂರು, ಕುದುರೆಮುಖ ಸೇರಿದಂತೆ ಇನ್ನು ಹಲವಾರು ಐತಿಹಾಸಿಕ ತಾಣಗಳ ಪ್ರವಾಸ ಮಾಡಬಹುದು. ಆದರೆ ಕರ್ನಾಟಕದ ಅಪರೂಪದ ಪ್ರವಾಸಿ ತಾಣಗಳು ಎಂದೆನಿಸಿಕೊಂಡಿರುವ ಕೆಲವು ಪ್ರವಾಸಿ ಆಕರ್ಷಣೆಗಳನ್ನು ನೀವು ಎಂದಾದರೂ ಅನ್ವೇಷಣೆ ಮಾಡಿದ್ದೀರಾ? ಇಲ್ಲ ಎಂಬುದಾದರೆ ಲೇಖನದಲ್ಲಿರುವ ಈ ತಾಣಗಳಿಗೆ ವಾರಾಂತ್ಯ ಸಮಯದಲ್ಲಿ ಒಮ್ಮೆ ಭೇಟಿ ಕೊಡಿ.

ಸೈಂಟ್ ಮೇರೀಸ್ ದ್ವೀಪ

ಉಡುಪಿಯ ಪ್ರವಾಸದಲ್ಲಿ ನೀವು ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳಬೇಡಿ. ಇದು ಜನಪ್ರಿಯ ಮಲ್ಪೆ ಕಡಲತೀರದಿಂದ ಕೆಲವೇ ಕಿ.ಮೀ ದೂರದಲ್ಲಿ ನೆಲೆಸಿರುವ ಗುಪ್ತ ರತ್ನವಾಗಿದೆ. ಕರ್ನಾಟಕದ ಅಪರೂಪದ ತಾಣಗಳಲ್ಲಿ ಈ ಸೈಂಟ್ ಮೇರೀಸ್ ದ್ವೀಪವು ಕೂಡ ಒಂದಾಗಿದೆ.

ಇದನ್ನು ಪ್ರೀತಿಯಿಂದ ತೆಂಗಿನಮರಗಳ ಐಲ್ಯಾಂಡ್ ಎಂಬ ಹೆಸರಿನಿಂದಲೂ ಜನರು ಕರೆಯುತ್ತಾರೆ. ವಾಸ್ಕೋ ಡ ಗಾಮ ತನ್ನ ಸಾಗರ ಮಾರ್ಗದಲ್ಲಿ ಪ್ರಯಾಣಿಸುವ ಸಮಯದಲ್ಲಿ ಈ ದ್ವೀಪದಲ್ಲಿ ಬಂದು ಇಳಿದು ‘ತಾಯಿ ಮೇರಿಗಾಗಿ ಸಮರ್ಪಿಸಿದ ತಾಣ’ ಎಂದು ಹೆಸರನ್ನು ಇಟ್ಟನ್ನು ಎಂದು ಹೇಳಲಾಗುತ್ತದೆ. ಉಡುಪಿಯ ಪ್ರವಾಸವನ್ನು ಸ್ವಲ್ಪ ಡಿಫರೆಂಟ್ ಆಗಿ ಕಳೆಯಲು ನೀವು ಖಂಡಿತವಾಗಿಯೂ ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗಲೇಬೇಕು.

ಬಂಡಾಜೆ ಜಲಪಾತ

ಸುಂದರವಾದ ಪಶ್ಚಿಮ ಘಟ್ಟಗಳ ಚಾರ್ಮಡಿ ಘಾಟ್ನಲ್ಲಿ ಅಡಗಿರುವ ಅದ್ಭುತ, ಈ ಬಂಡಾಜೆ ಜಲಪಾತವಾಗಿದೆ. ಇದನ್ನು ಅರ್ಬಿ ಜಲಪಾತವೆಂದೂ ಕೂಡ ಕರೆಯುತ್ತಾರೆ. ಸಾಹಸ ಮಾಡಲು ಬಯಸುವ ಚಾರಣಿಗರು ವಿಶಾಲವಾದ ಪ್ರಕೃತಿಯ ನಡುವೆ ರೋಮಾಂಚಕ ಪ್ರವಾಸ ಮಾಡಬಹುದು.

ಚಾರಣ ಮಾಡುವುದರ ಮೂಲಕವಷ್ಟೇ ನೀವು ಈ ಜಲಪಾತವನ್ನು ಅನ್ವೇಷಣೆ ಮಾಡಬಹುದು. ಸುಮಾರು 200 ಅಡಿ ಎತ್ತರದ ಪ್ರದೇಶದಿಂದ ಧುಮ್ಮಿಕ್ಕುವ ಜಲಪಾತದ ಸೌಂದರ್ಯ ನೋಡುವುದೇ ಸೋಜಿಗ. ವಾರಾಂತ್ಯದ ಸಮಯದಲ್ಲಿ ಸ್ನೇಹಿತರೊಂದಿಗೆ ಪ್ರವಾಸ ಮಾಡಲು ಬಂಡಾಜೆ ಜಲಪಾತಕ್ಕೆ ಹೋಗಬಹುದು.

ಚೋರ್ಲಾ ಘಾಟ್

ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯಗಳ ಗಡಿಗಳಲ್ಲಿ ನೆಲೆಸಿರುವ ಈ ಚೋರ್ಲಾ ಘಾಟ್ ಅತ್ಯಂತ ರಮಣೀಯವಾದ ಪ್ರವಾಸಿ ಸ್ಥಳವಾಗಿದೆ. ಇದು ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿನ ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದ್ದು, ಸುಮಾರು 800 ಮೀಟರ್ ಎತ್ತರದಲ್ಲಿದೆ.

ಈ ಘಾಟ್ನಲ್ಲಿ ಪ್ರಕೃತಿ ಸಂರಕ್ಷಣಾ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ಕಾಡು ನಡಿಗೆ, ಚಾರಣ, ಪಾದಯಾತ್ರೆ ಮಡಲು ಬಯಸುವ ಸಾಹಸಿ ಪ್ರವಾಸಿಗರಿಗೆ ಈ ಘಾಟ್ ಸ್ವಾಗತಿಸುತ್ತದೆ. ಕರ್ನಾಟಕದ ಅಪರೂಪದ ಪ್ರವಾಸಿ ತಾಣಗಳಲ್ಲಿ ಇದು ಕೂಡ ಒಂದು.

ಬನವಾಸಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಒಂದು ಸುಂದರವಾದ ಐತಿಹಾಸಿಕ ಪಟ್ಟಣವೇ ಬನವಾಸಿ. ಇದು ಪ್ರಶಾಂತವಾದ ವರದಾ ನದಿಯ ಸಮೀಪದಲ್ಲಿದೆ. ಒಂದು ಕಾಲದಲ್ಲಿ ಕದಂಬರ ರಾಜಧಾನಿಯಾಗಿದ್ದ, ಬನವಾಸಿಯ ಸೊಬಗನ್ನು ನೋಡಲು ಎರಡು ಕಣ್ಣುಗಳೇ ಸಾಲವು.

ನಿಮಗಿದು ತಿಳಿದಿರಲಿ, ಕದಂಬ ರಾಜ್ಯವನ್ನು ಕರ್ನಾಟಕದ ಪ್ರಥಮ ರಾಜ್ಯವೆಂದು ಹೇಳಲಾಗುತ್ತದೆ. ಇನ್ನು ಪ್ರವಾಸಿ ತಾಣಗಳ ವಿಷಯಕ್ಕೆ ಬಂದರೆ ಇಲ್ಲಿ ಮಧುಕೇಶ್ವರ ದೇವಾಲಯವಿದೆ. ಪುರಾತನ ಬನವಾಸಿ ಕೋಟೆ ಇದೆ. ಸೂಕ್ಷ್ಮ ಕೆತ್ತನೆಗಳ್ಳುಳ್ಳ ಸಂಕೀರ್ಣವನ್ನು ನೀವು ಇಲ್ಲಿ ನೋಡಬಹುದು. ಇತಿಹಾಸಕಾರರಿಗೆ ಮಾತ್ರ ಬನವಾಸಿ ಆಕರ್ಷಿಸುವುದಿಲ್ಲ ಬದಲಾಗಿ ಕುಟುಂಬದ ಜೊತೆ ಪ್ರವಾಸ ಮಾಡಲು ಯೋಗ್ಯವಾದ ತಾಣ ಇದಾಗಿದೆ.

ಅಪ್ಸರಕೊಂಡ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಕೇವಲ 8 ಕಿ.ಮೀ ದೂರದಲ್ಲಿ ಈ ಮನಮೋಹಕ ಅಪ್ಸರಕೊಂಡ ತಾಣವಿದೆ. ಸ್ಪಟಿಕ ಸ್ಪಷ್ಟವಾಗಿರುವ ಇಲ್ಲಿನ ನೀರು ಜಲಪ್ರೇಮಿಗಳನ್ನು ಆಕರ್ಷಿಸದೇ ಇರಲಾರದು. ಇನ್ನು ಈ ಕೊಳಕ್ಕೆ ಅಪ್ಸರಕೊಂಡ ಎಂಬ ಹೆಸರು ಬರಲು ಕಾರಣವೆಂದರೆ, ಅಪ್ಸರೆಯರು ಈ ಸುಂದರವಾದ ಕೊಳದಲ್ಲಿ ಸ್ನಾನ ಮಾಡುತ್ತಿದ್ದರು ಎನ್ನಲಾಗುತ್ತದೆ.

8 ರಿಂದ 10 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸದೇ ಇರಲಾರದು. ಇಲ್ಲಿ ಉಗ್ರ ನರಸಿಂಹದ ದೇವಾಲಯ, ರಾಮಚಂದ್ರಮಠ, ದೇವಿಯ ದೇವಾಲಯ, ಉದ್ಯಾನ ಸೇರಿದಂತೆ ಇನ್ನು ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ.

ಹಿಂದಿನ ಲೇಖನಮೈಸೂರು: ಸಾಲಭಾದೆಯಿಂದ ಬೇಸತ್ತ ಶಿಕ್ಷಕ ಆತ್ಮಹತ್ಯೆ
ಮುಂದಿನ ಲೇಖನಊಟಿ: ಜನವಸತಿ ಪ್ರದೇಶದ ಬಳಿಯೇ ಹಸು ಕೊಂದ ಹುಲಿ