ಮನೆ ರಾಜಕೀಯ ನಾಳೆಯಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ

ನಾಳೆಯಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ

0

ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಎಲ್ಲಾ ಸಿನಿಮಾ ಮಂದಿರ, ಜಿಮ್, ಈಜುಕೊಳ, ಯೋಗ ಸೆಂಟರ್‌ಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸಲಾಗಿದ್ದು, ಕೋವಿಡ್ ನಿಯಮ ಪಾಲಿಸುವುದು ಕಡ್ಡಾಯವಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ಶೇ.100ರಷ್ಟು ಆಸನ ಭರ್ತಿಗೆ ಜಿಮ್, ಈಜುಕೊಳ, ಯೋಗ, ಚಿತ್ರಮಂದಿರಕ್ಕೆ ಅವಕಾಶವಿದೆ. ಚಿತ್ರಮಂದಿರಗಳಲ್ಲಿ ಮಾಸ್ಕ್ ಕಡ್ಡಾಯ, ಮಂದಿರದ ಒಳಗಡೆ ತಿಂಡಿ ತೆಗೆದುಕೊಂಡು ಹೋಗಲು ಅವಕಾಶವಿಲ್ಲ.ಈ ಎಲ್ಲಾ ಸ್ಥಳಕ್ಕೆ ಎರಡು ಡೋಸ್ ಲಸಿಕೆ ಕಡ್ಡಾಯವಾಗಿದೆ. ಯೋಗ ಸೆಂಟರ್, ಸ್ವಿಮ್ಮಿಂಗ್, ಜಿಮ್ ಸೆಂಟರ್​​ಗಳಿಗೂ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಅಗತ್ಯ ಕೋವಿಡ್ ಮುನ್ನೆಚ್ಚರಿಕಾ ಕ್ರಮವನ್ನ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಡಿಸೆಂಬರ್ ಕೊನೆಯ ವಾರದಲ್ಲಿ ಒಮಿಕ್ರಾನ್ ಸೋಂಕು ಹೆಚ್ಚಾದ ಮೇಲೆ ಕೆಲವು ಕ್ರಮಗಳನ್ನ ತೆಗೆದುಕೊಳ್ಳಲಾಗಿತ್ತು. ಅನೇಕ ಕ್ರಮಗಳನ್ನ ಪರಿಶೀಲನೆ ಮಾಡಿ, ಆಸ್ಪತ್ರೆ ದಾಖಲಾತಿಯನ್ನ ಅವಲೋಕಿಸಿ ರಿಯಾಯಿತಿ ನೀಡಲು ಪ್ರಾರಂಭ ಮಾಡಿದ್ದೇವೆ. ಚನಲಚಿತ್ರ ಮಂದಿರ, ಯೋಗ ಸೆಂಟರ್, ಸ್ವಿಮ್ಮಿಂಗ್ ಫೂಲ್​​ಗೆ ಶೇ.50ರಷ್ಟು ಅವಕಾಶ ಕೊಟ್ಟಿದ್ದೆವು.ಇದಕ್ಕೆ ಸಂಬಂಧಿಸಿದಂತೆ ಸಿಎಂ ನೇತೃತ್ವದಲ್ಲಿ ಇವತ್ತು ಸಭೆ ನಡೆಸಿ, ಚರ್ಚಿಸಲಾಗಿದೆ. ಜನವರಿ ತಿಂಗಳಲ್ಲಿ ಶೇ.5-6ರಷ್ಟು ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದರು. ಫೆಬ್ರವರಿಯಲ್ಲಿ ಶೇ.2ರಷ್ಟು ದಾಖಲಾಗಿದ್ದಾರೆ. ಹೀಗಾಗಿ, ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಯಾವುದೇ ಉದ್ಯಮ ಹಾಗೂ ವ್ಯಕ್ತಿಗೆ ನಷ್ಟ ಆಗಬಾರದು ಎನ್ನುವ ಉದ್ದೇಶದಿಂದ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಾಣಿಜ್ಯ ಮಂಡಳಿಯವರು ಹೇಳಿದ್ದಾರೆ. ಸಿನಿಮಾ ಮಂದಿರಗಳಿಗೆ ಹೋಗುವ ಜನರು ಮಾಸ್ಕ್ ಹಾಕ್ಬೇಕು.ಸಿನಿಮಾ ಮಂದಿರದ ಒಳಗೆ ತಿಂಡಿ ತಿನಿಸುಗಳನ್ನ ತೆಗೆದುಕೊಂಡು ಹೋಗುವುದಕ್ಕೆ ನಿಷೇಧವಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವಾಗ ಬೇಕಾದರೂ ಹೋಗಿ ತಪಾಸಣೆ ಮಾಡಬಹುದು. ಸಿನಿಮಾ ಮಂದಿರ, ಯೋಗ ಸೆಂಟರ್​​, ಸ್ವಿಮ್ಮಿಂಗ್ ಫೂಲ್, ಜಿಮ್ ಸೆಂಟರ್​​ಗಳಲ್ಲಿ ಯಾವುದೇ ಒಬ್ಬ ವ್ಯಕ್ತಿ ಪ್ರವೇಶ ಮಾಡಲು 2 ಡೋಸ್ ಲಸಿಕೆ ಕಡ್ಡಾಯ, ಲಸಿಕೆ ಪಡೆದಿಲ್ಲ ಎಂದರೆ ಪ್ರವೇಶ ನೀಡುವಂತಿಲ್ಲ ಎಂದರು.

ಸಭೆ-ಸಮಾರಂಭಗಳಲ್ಲಿ ಯಾವುದೇ ರೀತಿಯಲ್ಲೂ ಬದಲಾವಣೆ ಇಲ್ಲ. ಸದ್ಯ ಈಗ ಇರುವಂತಹ ನಿಯಮಗಳು ಯಥಾವತ್ತಾಗಿ ಮುಂದುವರಿಕೆ ಆಗಲಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಅವುಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸುಧಾಕರ್ ಮಾಹಿತಿ ನೀಡಿದರು.

ಹಿಂದಿನ ಲೇಖನಶಿಕ್ಷಣ ಬೇಕಾದರೇ ಸಮವಸ್ತ್ರ ಧರಿಸಿ ತರಗತಿಗೆ ಬರಲಿ:  ಸಚಿವ ಬಿ.ಸಿ ನಾಗೇಶ್
ಮುಂದಿನ ಲೇಖನಪೀಠಕ್ಕೆ ನೀಡಿರುವ ಕಾಣಿಕೆ ವಾಪಸ್ ಕೇಳುವ ಸಣ್ಣವ ನಾನಲ್ಲ: ಮುರುಗೇಶ್ ನಿರಾಣಿ