ಮನೆ ಅಪರಾಧ ಹಿಂದಿ ಹೇರಿಕೆ ವಿರುದ್ಧ ವಾಟಾಳ್ ನಾಗರಾಜ್ ಧರಣಿ

ಹಿಂದಿ ಹೇರಿಕೆ ವಿರುದ್ಧ ವಾಟಾಳ್ ನಾಗರಾಜ್ ಧರಣಿ

0

ಮೈಸೂರು(Mysuru):  ಹಿಂದಿ ಹೇರಿಕೆ ವಿರುದ್ಧ  ನಗರದ ಜಯಚಾಮರಾಜೇಂದ್ರ ವೃತ್ತದ ಬಳಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಪ್ಪುಪಟ್ಟಿ ತೋರಿಸಿ ಪ್ರತಿಭಟನೆ‌ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಕೇಂದ್ರದ ಹಿಂದಿ ಹೇರಿಕೆ ಸರಿಯಲ್ಲ. ಹಿಂದಿ ಹೇರಿಕೆ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ.  ಮೇ 14 ರಂದು ವಾಟಾಳ್ ಪಕ್ಷದಿಂದ ರಾಜ್ಯಾದ್ಯಂತ ಚಳವಳಿ ಮಾಡುತ್ತೇವೆ.  ಬ್ಯಾಂಕ್,  ರೈಲ್ವೇ ಮುಂದೆ ಬೃಹತ್ ಧರಣಿ ನಡೆಸುತ್ತೇವೆ. ನಮಗೆ ಹಿಂದಿ ಬೇಡವೇ ಬೇಡ ಎಂದು ಹೇಳಿದರು.

ಕರ್ನಾಟಕದಲ್ಲಿ ಕನ್ನಡವೇ ರಾಷ್ಟ್ರೀಯ ಭಾಷೆ. ಹಿಂದಿ ಭಾಷೆ ಅಪಾಯಕಾರಿ, ಹಿಂದಿಯನ್ನ ಉತ್ತರ ಪ್ರದೇಶದಲ್ಲೇ ಇಟ್ಟುಕೊಳ್ಳಿ. ಬ್ಯಾಂಕ್, ರಾಜಭವನದ ಎದುರಿನ ಹಿಂದಿ ಫಲಕ ತೆಗೆಯಿರಿ. ವಿಧಾನಸಭೆಯಲ್ಲಿ ಹಿಂದಿ ಭಾಷಣ ಬೇಡ. ಶಾಸಕರು ಹಿಂದಿ ಭಾಷಣ ಬಹಿಷ್ಕರಿಸಿ ಸಭಾತ್ಯಾಗ ಮಾಡಿ. ಸರ್ಕಾರ ಹಿಂದಿ ಭಾಷೆಯನ್ನ ಸಂಪೂರ್ಣ ಬಹಿಷ್ಕರಿಸಬೇಕು. ಹಿಂದಿ ಚಿತ್ರಗಳ ವಿರುದ್ಧ ಹೋರಾಟ ಮಾಡುತ್ತೇವೆ. ಹಿಂದಿ ಸಂಪರ್ಕ ಭಾಷೆ ಎಂಬುದು ದಬ್ಬಾಳಿಕೆ, ಇದಕ್ಕೆ ಯಾರೂ ಹೆದರುವುದು ಬೇಡ. ಕನ್ನಡವೇ ನಮಗೆ ಶಕ್ತಿ, ಕನ್ನಡವೇ ನಮ್ಮ ಭಾಷೆ. ಹಿಂದಿ ವಿರುದ್ಧ ನಾನೇ ಮೈಸೂರಿನಿಂದ ಹೋರಾಟ ಆರಂಭಿಸಿದ್ದೆ ಎಂದರು.

ಹಿಂದಿ ರಾಷ್ಟ್ರೀಯ ಭಾಷೆ ಎಂದು ಬಾಲಿವುಡ್ ನಟ ಅಜಯ್ ದೇವಗನ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಅಜಯ್ ದೇವಗನ್ ಅವಿವೇಕಿ, ಮೂರ್ಖ. ಅವನ ಮಾತನ್ನು ನಾವು ತಿರಸ್ಕರಿಸುತ್ತೇವೆ ಎಂದು ಕಿಡಿಕಾರಿದರು.

ಪಿಎಸ್ ಐ ಅಕ್ರಮ ಹಿನ್ನೆಲೆ ಮರು ಪರೀಕ್ಷೆ ವಿಚಾರ ಕುರಿತು ಪ್ರತಿಕ್ರಿಯಿಸಿದ ವಾಟಳ್ ನಾಗರಾಜ್, ಇದನ್ನ ಸಿಎಂ ಗಂಭೀರವಾಗಿ ಚಿಂತಿಸಬೇಕು. ಪರೀಕ್ಷೆ ಸಂಪೂರ್ಣ ರದ್ದು ಮಾಡಿ, ಮರು ಪರೀಕ್ಷೆ ಮಾಡಲು ಹೊರಟಿದ್ದೀರಿ. ಯಾರು ಮೋಸ, ಕಳ್ಳತನದಲ್ಲಿ ಪರೀಕ್ಷೆ ಬರೆದಿದ್ದಾರೆ ಅದನ್ನ ತನಿಖೆ ಮಾಡಿ, ಜೈಲಿಗೆ ಕಳುಹಿಸಿ. ನಿರಪರಾಧಿಗಳಿಗೆ ಮರು ಪರೀಕ್ಷೆ ಬೇಡ. ಪ್ರಾಮಾಣಿಕವಾಗಿ ಬರೆದವರಿಗೆ ಮರು ಪರೀಕ್ಷೆ ಬೇಡ. ಪ್ರಾಮಾಣಿಕರಿಗೆ ಸರ್ಕಾರ ಬೆಂಬಲ ನೀಡಬೇಕು ಎಂದು ಸಲಹೆ ನೀಡಿದರು.

ಹಿಂದಿನ ಲೇಖನಅತ್ಯಾಚಾರಕ್ಕೆ ಯತ್ನ: ವಿರೋಧಿಸಿದ ಯುವತಿಯನ್ನು ರೈಲಿನಿಂದ ಹೊರ ಎಸೆದ ಕಾಮುಕ
ಮುಂದಿನ ಲೇಖನಆರಗ ಜ್ಞಾನೇಂದ್ರರನ್ನು ಸಂಪುಟದಿಂದ ವಜಾಗೊಳಿಸಿ: ಸಿದ್ದರಾಮಯ್ಯ