ಮನೆ ಕಾನೂನು ಪೋಕ್ಸೊ ಕೇಸ್ ನಲ್ಲಿ ಜಾಮೀನು ನೀಡಲು ಅನುಸರಿಸಬೇಕಾದ ನಿಯಮಗಳು ಯಾವುವು?: ಇಲ್ಲಿದೆ ಮಾಹಿತಿ

ಪೋಕ್ಸೊ ಕೇಸ್ ನಲ್ಲಿ ಜಾಮೀನು ನೀಡಲು ಅನುಸರಿಸಬೇಕಾದ ನಿಯಮಗಳು ಯಾವುವು?: ಇಲ್ಲಿದೆ ಮಾಹಿತಿ

0

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ-2012 ಅಡಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗೆ ಜಾಮೀನು ನೀಡುವ ಮುನ್ನ ಅನುಸರಿಸಬೇಕಾದ ಕ್ರಮಗಳ ಕುರಿತು ಹೈಕೋರ್ಟ್ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದೆ. ಈ ಕುರಿತಂತೆ ಬೆಂಗಳೂರಿನ ಮೂವರು ಸಂತ್ರಸ್ತ ಪೋಷಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿರುವ ವಿಭಾಗೀಯ ಪೀಠ, ಸಂತ್ರಸ್ತ ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಹಲವು ನಿರ್ದೇಶನಗಳನ್ನು ನೀಡಿದೆ.

ಪೀಠ ತನ್ನ ಆದೇಶದಲ್ಲಿ ಪೋಕ್ಸೋ ಪ್ರಕರಣಗಳಲ್ಲಿ ಆರೋಪ ಸಾಬೀತು ಮಾಡುವುದು ಸರ್ಕಾರದ ಹೊಣೆಗಾರಿಕೆಯಾಗಿದೆ. ಹಾಗೆಯೇ, ಸಂತ್ರಸ್ತ ಮಗು ಹಾಗೂ ದೂರುದಾರರು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಅಭಿಯೋಜಕರಿಗೆ ಅಗತ್ಯ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ಪ್ರಕರಣದ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ಸಂತ್ರಸ್ತರಿಗೆ ಈ ಬಗ್ಗೆ ಮಾಹಿತಿಯೇ ಇರುವುದಿಲ್ಲ, ಹೀಗಾಗಿ, ಪೋಕ್ಸೋ ಪ್ರಕರಣಗಳಲ್ಲಿ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ವಿಶೇಷ ನ್ಯಾಯಾಲಯಗಳು ಸಂತ್ರಸ್ತ ಕುಟುಂಬಕ್ಕೆ, ಪೋಷಕರಿಗೆ ಅಥವಾ ಅವರ ವಕೀಲರಿಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ನಿರ್ದೇಶಿಸಿದೆ.

ಹೈಕೋರ್ಟ್ ನಿರ್ದೇಶನಗಳೇನು: ಪೋಕ್ಸೋ ಪ್ರಕರಣದಲ್ಲಿ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ತನಿಖಾಧಿಕಾರಿಯು ಸಂತ್ರಸ್ತರ ಪೋಷಕರು ಅಥವಾ ಪಾಲಕರು ಹಾಗೂ ಅಭಿಯೋಜಕರಿಗೆ ಮಾಹಿತಿ ನೀಡಬೇಕು. ಸರ್ಕಾರಿ ಅಭಿಯೋಜಕರು ಜಾಮೀನು ಅರ್ಜಿಗೆ ತಕ್ಷಣವೇ ಸೂಕ್ತ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬೇಕು. ಈ ವೇಳೆ ಅಭಿಯೋಜಕರಿಗೆ ತನಿಖಾಧಿಕಾರಿ ಹಾಗೂ ಸಂತ್ರಸ್ತರ ಕುಟುಂಬದವರು ಅಗತ್ಯ ಸಹಕಾರ ಹಾಗೂ ಮಾಹಿತಿ ನೀಡಬೇಕು.

ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ತನಿಖಾಧಿಕಾರಿಯ ಸಹಾಯ ಪಡೆಯಬೇಕು. ದೊರಕದಿದ್ದರೆ ಆ ಬಗ್ಗೆ ಸೂಕ್ತ ಲಿಖಿತ ಕಾರಣಗಳೊಂದಿಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಒಂದು ವೇಳೆ ಇಂತಹ ಪ್ರಕರಣದ ಆರೋಪಿ ಸಂತ್ರಸ್ತ ಕುಟುಂಬಕ್ಕೆ ಪರಿಚಯಸ್ಥ ಆಗಿದ್ದರೆ ಜಾಮೀನಿಗೆ ಸಲ್ಲಿಸಿರುವ ಆಕ್ಷೇಪಣೆ ದಾಖಲೆಗಳನ್ನು ಮಕ್ಕಳ ಕಲ್ಯಾಣ ಸಮಿತಿಗಳಿಗೂ (ಸಿಡಬ್ಲ್ಯೂಸಿ) ಸಲ್ಲಿಸಬೇಕು.

ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಸಂಬಂಧಿಸಿದ ನ್ಯಾಯಾಲಯ ಸಂತ್ರಸ್ತರ ಕುಟುಂಬಕ್ಕೆ ನೋಟಿಸ್ ಜಾರಿಯಾಗಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು ಹಾಗೂ ಸಂತ್ರಸ್ತರ ಪ್ರತಿ ವಾದ ಆಲಿಸಬೇಕು. ಒಂದು ವೇಳೆ ನೋಟಿಸ್ ಜಾರಿಯಾದ ನಂತರವೂ ಸಂತ್ರಸ್ತರ ಕಡೆಯಿಂದ ಯಾರೂ ಹಾಜರಾಗದಿದ್ದರೆ ವಿಶೇಷ ನ್ಯಾಯಾಲಯ ತನ್ನ ವಿಚಾರಣಾ ಪ್ರಕ್ರಿಯೆ ಮುಂದುವರಿಸಬಹುದು.

ಸಂತ್ರಸ್ತರು/ದೂರುದಾರರು/ಮಾಹಿತಿದಾರರು ಸ್ವಂತ ವಕೀಲರ ಮೂಲಕ ಅಥವಾ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ನೇಮಿಸಲ್ಪಟ್ಟ ವಕೀಲರಿಂದ ಪ್ರತಿನಿಧಿಸಬಹುದು. ಹೀಗೆ ನೇಮಕಗೊಂಡ ವಕೀಲರಿಗೆ ಸೇವಾ ಶುಲ್ಕ ಪಾವತಿಸಲು ಸರ್ಕಾರ ಅಗತ್ಯ ಹಣಕಾಸು ಸೌಲಭ್ಯ ನೀಡಬೇಕು. ಸಾಕ್ಷಿ ಸಂರಕ್ಷಣೆ ಯೋಜನೆ-2018 ರ ಅಡಿಯಲ್ಲಿ ಲಭ್ಯವಿರುವ ರಕ್ಷಣೆ ಬಗ್ಗೆ ತಿಳಿಸಬೇಕು. ಒಂದು ವೇಳೆ ರಕ್ಷಣೆ ಅಗತ್ಯವಿದ್ದಲ್ಲಿ ಸೂಕ್ತ ಭದ್ರತೆ ಒದಗಿಸಬೇಕು.

ಹೈಕೋರ್ಟ್ ನ ಈ ಆದೇಶದ ಪ್ರತಿಯನ್ನು ಎಲ್ಲ ಜಿಲ್ಲಾ ನ್ಯಾಯಾಲಯಗಳಿಗೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ತಲುಪಿಸಬೇಕು. ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಈ ಕುರಿತಂತೆ ಅಗತ್ಯ ಸೂಚನೆಗಳನ್ನು ನೀಡಬೇಕು.

ಹಿಂದಿನ ಲೇಖನನಕ್ಕು ನಲಿಯಿರಿ
ಮುಂದಿನ ಲೇಖನಸಮುದಾಯ ಆರೋಗ್ಯ ಕೇಂದ್ರಗಳಿಗೆ ಆರು ಕಮಾಂಡರ್ ಸೆಂಟರ್’ಗಳ ಜೋಡಣೆ: ಸಿಎಂ ಬೊಮ್ಮಾಯಿ