ಬೆಂಗಳೂರು : ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಜಟಾಪಟಿ ಮತ್ತೆ ಜೋರಾಗಿದೆ. ನೀ ಕೊಡಲ್ಲ, ನಾ ಬಿಡಲ್ಲ ಎನ್ನುವಂತಾಗಿದೆ ಸಾರಿಗೆ ನೌಕರರ ಸ್ಥಿತಿ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕು ನಿಗಮಗಳ ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ. ಸರ್ಕಾರದ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆ ಇದೀಗ ಸಾರಿಗೆ ನೌಕರರು ಮತ್ತೆ ಹೋರಾಟದ ಹಾದಿ ಹಿಡಿದಿದ್ದಾರೆ. ಮೇ 20ರಿಂದ ರಾಜ್ಯ ಸಾರಿಗೆ ಸ್ತಬ್ಧವಾಗಲಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿ ನಾಲ್ಕು ನಿಗಮಗಳ ಬಸ್ಗಳು ರಸ್ತೆಗಿಳಿಸದಿರಲು ನಿರ್ಧರಿಸಲಾಗಿದೆ.
ಇಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಸುದ್ದಿಗೋಷ್ಠಿ ನಡೆಸಿ ಮುಂದಿನ ಹೋರಾಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲು ಸಾರಿಗೆ ನೌಕರರ ಸಂಘಟನೆ ದೃಢ ನಿರ್ಧಾರ ಮಾಡಿದೆ. ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಬಾರಿ ಸರ್ಕಾರಕ್ಕೆ ಜೋರಾಗಿಯೇ ಬಿಸಿ ಮುಟ್ಟಿಸಲು ಸಾರಿಗೆ ನೌಕರರು ಮುಂದಾಗಿದ್ದಾರೆ.
ಸಾರಿಗೆ ನೌಕರರ ಬೇಡಿಕೆ ಏನು? – 38 ತಿಂಗಳ ಹಿಂಬಾಕಿ ವೇತನ ನೀಡಬೇಕು. – 2024ರ ಜನವರಿ 1ರಿಂದ ಮೂಲ ವೇತನ ಶೇ.25ರಷ್ಟು ಏರಿಸಬೇಕು. – ಮೂಲ ವೇತನದಲ್ಲಿ ಶೇ.31ರಷ್ಟು ತುಟ್ಟಿ ಭತ್ಯೆ ವಿಲೀನಗೊಳಿಸಬೇಕು. – 26 ತಿಂಗಳ ಬಾಕಿ 1,272 ಕೋಟಿ ಒಂದೇ ಕಂತಿನಲ್ಲಿ ಬಿಡುಗಡೆ. – ಕೋವಿಡ್ ಸಮಯದಲ್ಲಿನ ಅರಿಯರ್ಸ್ ನೀಡಬೇಕು. ಈ ಬೇಡಿಕೆ ಈಡೇರದಿದ್ದರೆ ಮೇ 20ರ ಬೆಳಗ್ಗೆ 6 ಗಂಟೆಯಿಂದ ಸಾರಿಗೆ ಬಸ್ಗಳನ್ನ ಬಂದ್ ಮಾಡಲಾಗುತ್ತೆ ಎಂದು ಸಾರಿಗೆ ನೌಕರರ ಸಂಘಟನೆಗಳು ಎಚ್ಚರಿಕೆ ನೀಡಿದೆ. ಸಾರ್ವಜನಿಕರಿಗೆ ತೊಂದರೆ ಆದರೆ ಅದಕ್ಕೆ ಸರ್ಕಾರವೇ ಹೊಣೆ, ಸಾರಿಗೆ ನೌಕರರು ಜವಾಬ್ದಾರಿ ಅಲ್ಲ ಎನ್ನುವ ಸಂದೇಶ ನೀಡಿದೆ.
ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ನಾಲ್ಕೂ ಸಾರಿಗೆ ನಿಗಮಗಳು ಭಾಗಿಯಾಗೋ ಸಾಧ್ಯತೆ ಇದೆ. ಸುಮಾರು 1.25 ಲಕ್ಷಕ್ಕೂ ಹೆಚ್ಚು ನೌಕರರು ಈ ಹೋರಾಟದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಇನ್ಮೇಲೆ ಮಾತುಕತೆ ಇಲ್ಲ. ಕೇವಲ ಇತ್ಯರ್ಥಕ್ಕಷ್ಟೇ ಅವಕಾಶ. ಈ ಬಾರಿ ಅವರು ಹೇಳೋದನ್ನ ನಾವು ಕೇಳಲ್ಲ. ಸ್ಟೇರಿಂಗ್ ಹಿಡಿಯೋದು ನಿಲ್ಲಿಸಿ ಡ್ರೈವರ್ಸ್ ಮನೆಯಲ್ಲಿ ಇರುತ್ತಾರೆ. ಟಿಕೆಟ್ ಹರಿಯೋದನ್ನ ನಿಲ್ಲಿಸಿ ಕಂಡಕ್ಟರ್ ಮನೆಯಲ್ಲಿ ಇರುತ್ತಾರೆ. ಸ್ಪಾನರ್ ಹಿಡಿಯೋದನ್ನ ಬಿಟ್ಟು ಸಿಬ್ಬಂದಿ ಮನೆಯಲ್ಲಿ ಇರುತ್ತಾರೆ ಎಂದು ಜಂಟಿ ಕ್ರಿಯಾ ಸಮಿತಿ ಮುಖಂಡರು ಎಚ್ಚರಿಸಿದ್ದಾರೆ. ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ತಿಕ್ಕಾಟ ಮುಂದುವರಿದಿದ್ದು, ಸರ್ಕಾರ ಇವರ ಬೇಡಿಕೆಗಳನ್ನ ಈಡೇರಿಸುತ್ತಾ? ಇಲ್ಲ ಬಸ್ ಮುಷ್ಕರ ನಡೆಯುತ್ತಾ ಅನ್ನೋದು ಮೇ 20ರೊಳಗೆ ತಿಳಿಯಲಿದೆ.















