ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಡಾಕ್ಟರ್ ನಾಗೇಶ್ ಕ್ಲಿನಿಕ್ ನಲ್ಲಿ ಬಹಳ ಮಂದಿ ರೋಗಿಗಳು ತಮ್ಮ ಸರದಿಗಾಗಿ ತುಂಬಾ ಹೊತ್ತಿನಿಂದ ಕಾದಿದ್ದರು. ಮುದುಕರೊಬ್ಬರು ಗೋಣಗುತ್ತ ಎದ್ದರು. “ಇನ್ನು ನಾನು ಕಾಯೊಲ್ಲ. ಮನೆಗೆ ಹೋಗಿ ಸಹಜವಾಗಿ ಸಾಯ್ತಿನಿ, ಇವರ ಔಷಧಿಯೇ ಬೇಡ!”

***

ಮೇಷ್ಟ್ರು : ಅಷ್ಟೋತ್ತರ ಎಂದರೇನು ಗೊತ್ತಾ?

ಮೂರ್ತಿ : ಪ್ರಶ್ನೆ ಎಷ್ಟಿರುತ್ತೋ ಅಷ್ಟೇ ಉತ್ತರಕೊಡುವುದು.

ಮೇಷ್ಟ್ರು : ಮರಣೋತ್ತರ ಅಂದ್ರೆ ಏನು?

ಮೂರ್ತಿ : ಪರೀಕ್ಷೆಯಲ್ಲಿ ಉತ್ತರ ಬರೆಯುತ್ತಾ ಪ್ರಾಣ ಬಿಡುವುದು.

***

ಹೆಂಡ್ತಿ : ಡಾಕ್ಟ್ರೇ ನಮ್ಮ ಯಜಮಾನರನ್ನ ಸ್ವಲ್ಪ ಸರಿಯಾಗಿ ಚೆಕಪ್ ಮಾಡಿ.

ಡಾಕ್ಟರು : ನಿಮ್ಮ ಯಜಮಾನರಿಗೆ ಏನಾಗಿದೆಯಮ್ಮ?

ಹೆಂಡ್ತಿ: ನಾನು ಇವರ ಮೇಲೆ ಜಗಳ ತೆಗೆದು ಜೋರಾಗಿ ಬಯ್ಯೋಕೆ ಶುರುಮಾಡಿದ್ರೆ ಸಾಕು, ಇವರಿಗೆ ಕಿವುಡು ಪ್ರಾರಂಭವಾಗಿ ಬಿಡುತ್ತೆ.

***

ತಾತ : ನಿನಗೆಷ್ಟು ವಯಸ್ಸು ಮಗು? 

ಮಗು: ಗೊತ್ತಿಲ್ಲ ತಾತ! ನಾನು ಹುಟ್ಟಿದಾಗ ಅಮ್ಮನಿಗೆ 28 ಆಗಿತ್ತಂತೆ, ಈಗ ಅವಳು ವಯಸ್ಸನ್ನು ಕೇಳಿದರೆ 26 ಎನ್ನುತ್ತಾಳೆ.

***

ಫೈರ್ ಸ್ಟೇಷನ್ ನಿಗೆ ಫೋನ್ ಮಾಡಿದ ತಂದೆ, “ಸಾರ್ ನಿನ್ನೆಯಿಂದ ನನ್ನ ಮಗಳು ಕಾಣ್ತಾ ಇಲ್ಲ.” ಎಂದ.

“ಆದರೆ ಇದು ಪೊಲೀಸ್ ಸ್ಟೇಷನ್ ಅಲ್ಲ” ಎಂಬ ಉತ್ತರ ಆ ಕಡೆಯಿಂದ ಬಂತು.

“ಅದು ನನಗೂ ಗೊತ್ತು ಸಾರ್. ನಿಮ್ಮ ಫೈರ್ ಸ್ಟೇಷನ್ ನಲ್ಲಿ ಕೆಲಸ ಮಾಡೋ ಬಾಲು, ನಮ್ಮ ಮನೆಗೆ ಆಗಾಗ ಬರ್ತಾ ಇದ್ದ.”