ಮನೆ ಕಾನೂನು ವಿಧವಾ ವೇತನ ದುರ್ಬಳಕೆ: 80 ವರ್ಷದ ನಿವೃತ್ತ ಸರ್ಕಾರಿ ನೌಕರನ 1 ವರ್ಷ ಶಿಕ್ಷೆಯನ್ನು 1...

ವಿಧವಾ ವೇತನ ದುರ್ಬಳಕೆ: 80 ವರ್ಷದ ನಿವೃತ್ತ ಸರ್ಕಾರಿ ನೌಕರನ 1 ವರ್ಷ ಶಿಕ್ಷೆಯನ್ನು 1 ದಿನಕ್ಕೆ ಇಳಿಸಿದ ಹೈಕೋರ್ಟ್

0

ಸರ್ಕಾರಿ ಉದ್ಯೋಗಿಯಾಗಿದ್ದಾಗ 36 ವರ್ಷಗಳ ಹಿಂದೆ ವಿಧವಾ ವೇತನ ದುರ್ಬಳಕೆ ಮಾಡಿದ್ದ ಪ್ರಕರಣದಲ್ಲಿ 80 ವರ್ಷದ ವೃದ್ಧರೊಬ್ಬರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಒಂದು ದಿನಕ್ಕೆ ಇಳಿಸಿದೆ.

Join Our Whatsapp Group

 [ಹನುಮಂತರಾವ್ ವರ್ಸಸ್ ಕರ್ನಾಟಕ ರಾಜ್ಯ].

ಅಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ಮೈಸೂರು ಜಿಲ್ಲೆಯ ಕೆ ಆರ್ ನಗರದ ನಿವಾಸಿ ಹನುಮಂತ ರಾವ್ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.

“ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಅಧೀನ ನ್ಯಾಯಾಲಯದ ಆದೇಶ ಎತ್ತಿಹಿಡಿಯಲಾಗಿದೆ. ಆದರೆ, ಆರೋಪಿಗೆ 80 ವರ್ಷ ಆಗಿರುವ ಮತ್ತು ದುರ್ಬಳಕೆ ಮಾಡಿಕೊಂಡಿದ್ದ ಹಣವನ್ನು 36 ವರ್ಷಗಳ ಹಿಂದೆಯೇ ಸರ್ಕಾರ ವಸೂಲಿ ಮಾಡಿರುವ ಅಂಶ ಪರಿಗಣಿಸಿ ಒಂದು ವರ್ಷದ ಜೈಲು ಶಿಕ್ಷೆಯನ್ನು ಒಂದು ದಿನಕ್ಕೆ (ನ್ಯಾಯಾಲಯದ ಕಲಾಪ ಆರಂಭವಾಗಿ ಮುಕ್ತಾಯಗೊಳ್ಳುವ ಅವಧಿಯವರೆಗೆ) ಕಡಿತಗೊಳಿಸಲಾಗಿದೆ” ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

“ಅರ್ಜಿದಾರರಿಗೆ 80 ವರ್ಷವಾಗಿದೆ. ಅವರು ಎಸಗಿದ್ದಾರೆ ಎನ್ನಲಾದ ಅಪರಾಧ ಕೃತ್ಯ 36 ವರ್ಷಗಳ ಹಿಂದೆ ನಡೆದಿದೆ. ಇದು ಅವರು ಎಸಗಿದ ಮೊದಲ ಅಪರಾಧ. ಇತರೆ ಅಪರಾಧಿಕ ಹಿನ್ನೆಲೆ ಇಲ್ಲ. ಈ ಎಲ್ಲಾ ಅಂಶ ಪರಿಗಣನೆಗೆ ತೆಗೆದುಕೊಂಡು ಶಿಕ್ಷೆ ಪ್ರಮಾಣವನ್ನು ಒಂದು ದಿನಕ್ಕೆ ಇಳಿಸಲಾಗುತ್ತಿದೆ. ಆದರೆ, ಎರಡೂ ಅಪರಾಧಗಳಿಗೆ ತಲಾ 10 ಸಾವಿರ ರೂಪಾಯಿ ದಂಡ ಪಾವತಿಸಬೇಕು. ತಪ್ಪಿದರೆ 3 ತಿಂಗಳ ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು” ಎಂದು ಆದೇಶಿಸಿದೆ.

ಅರ್ಜಿದಾರರ ಪರ ವಕೀಲ ಎಂ ಬಿ ಚಂದ್ರಚೂಡ್ ಅವರು “ಹನುಮಂತ ರಾವ್ ಅವರಿಗೆ ಸದ್ಯ 80 ವರ್ಷ. ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದಾರೆ. ದುರ್ಬಳಕೆ ಮಾಡಿಕೊಂಡಿದ್ದ ಹಣವನ್ನು 1987ರಲ್ಲಿಯೇ ಸರ್ಕಾರವು ವಸೂಲಿ ಮಾಡಿದೆ. ನಿವೃತ್ತ ನೌಕರರಾದ ಅರ್ಜಿದಾರರು ಎಸಗಿದ ಮೊದಲ ಅಪರಾಧ ಕೃತ್ಯ ಇದಾಗಿದೆ. ರಾವ್ ಅವರು ಅಪರಾಧಿಕ ಹಿನ್ನೆಲೆ ಹೊಂದಿಲ್ಲ. ಆದ್ದರಿಂದ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು” ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: 1981ರ ನವೆಂಬರ್ 21ರಿಂದ 1987ರ ಜನವರಿ 5ರ ಅವಧಿಯಲ್ಲಿ ಹನುಮಂತ್ ರಾವ್, ಮಂಡ್ಯದ ಕೆ ಆರ್ ಪೇಟೆಯಲ್ಲಿ ರಾಜ್ಯ ಖಜಾನೆ ಇಲಾಖೆ ಅಧಿಕಾರಿಯಾಗಿದ್ದರು. ಈ ಅವಧಿಯಲ್ಲಿ ವಿಧವಾ ವೇತನ ಮಂಜೂರಾತಿಯಲ್ಲಿ 54,299 ರೂಪಾಯಿ ದುರ್ಬಳಕೆ ಮಾಡಿದ್ದರು. ಲೆಕ್ಕ ಪರಿಶೋಧನೆ ವೇಳೆ ಈ ಅಕ್ರಮ ಬಯಲಾಗಿತ್ತು. ಆ ಸಂಬಂಧ ಹುನುಮಂತ್ ರಾವ್ಗೆ ನೋಟಿಸ್ ಜಾರಿಗೊಳಿಸಿದ್ದ ಸರ್ಕಾರ, ದುರ್ಬಳಕೆ ಮಾಡಿಕೊಂಡ ಹಣವನ್ನು 1987ರ ಜನವರಿ 31ರ ಅಂತ್ಯದ ವೇಳೆಗೆ ಹಿಂದಿರುಗಿಸುವಂತೆ ಸೂಚಿಸಿತ್ತು. ನಂತರ ಆ ಮೊತ್ತವನ್ನು ರಾವ್ ವೇತನದಿಂದ ಕಡಿತ ಮಾಡಿತ್ತು.

ಈ ನಡುವೆ ಅಂದಿನ ಮಂಡ್ಯ ಜಿಲ್ಲಾ ಖಜಾನೆ ಅಧಿಕಾರಿ ಸಿ ಎಸ್ ಮುತ್ತಣ್ಣ, ಸರ್ಕಾರಿ ಆಸ್ತಿಗೆ ಸಂಬಂಧಿಸಿದಂತೆ ನಂಬಿಕೆ ದ್ರೋಹ (ಐಪಿಸಿ ಸೆಕ್ಷನ್ 409) ಮತ್ತು ಸುಳ್ಳು ಲೆಕ್ಕ ಬರೆದ (ಐಪಿಸಿ ಸೆಕ್ಷನ್ 477ಎ) ಆರೋಪ ಸಂಬಂಧ ಕೆ ಆರ್ ಪೇಟೆ ಪೊಲೀಸ್ ಠಾಣೆಗೆ ಕ್ರಿಮಿನಲ್ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೆ ಆರ್ ಪೇಟೆ ಜೆಎಂಎಫ್’ಸಿ ನ್ಯಾಯಾಲಯವು ಈ ಎರಡೂ ಅಪರಾಧಗಳಿಗೆ ತಲಾ ಒಂದು ವರ್ಷ ಶಿಕ್ಷೆ ಮತ್ತು 3 ಸಾವಿರ ರೂಪಾಯಿ ದಂಡ ವಿಧಿಸಿ 2009ರ ಏಪ್ರಿಲ್ 8ರಂದು ಆದೇಶಿಸಿತ್ತು. ಈ ಆದೇಶವನ್ನು ಮಂಡ್ಯದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಪುರಸ್ಕರಿಸಿತ್ತು. ಹೀಗಾಗಿ, ಹನುಮಂತ್ ರಾವ್ ಹೈಕೋರ್ಟ್ ಕದ ತಟ್ಟಿದ್ದರು.

ಹಿಂದಿನ ಲೇಖನಒಬ್ಬ ಅಭ್ಯರ್ಥಿ ಗರಿಷ್ಟ ೪೦ ಲಕ್ಷ ಚುನಾವಣಾ ವೆಚ್ಚ ಮಾಡಲು ಅವಕಾಶ: ಡಾ.ಕೆ.ವಿ. ರಾಜೇಂದ್ರ
ಮುಂದಿನ ಲೇಖನಬೆಂಗಳೂರಿನಲ್ಲಿ ಮುಂದಿನ ಐದು ದಿನ ಮಳೆ: ಹವಮಾನ ಇಲಾಖೆ