ಬೆಂಗಳೂರು: ಮಾಹಿತಿ ವಿಳಂಬ ಮಾಡಿದರೆ ಸರ್ಕಾರಿ ಅಧಿಕಾರಿಗಳಷ್ಟೇ ಅಲ್ಲ ಮಾಹಿತಿ ಆಯುಕ್ತರಿಗೂ ದಂಡ ವಿಧಿಸಬಹುದು.
ಹೌದು. ಈ ರೀತಿ ದಂಡನೆಗೆ ಒಳಗಾದವರು ಬೇರಾರೂ ಅಲ್ಲ. ರಾಜ್ಯ ಮಾಹಿತಿ ಹಕ್ಕು ಆಯುಕ್ತ ಎ.ಕೆ.ಎಂ ನಾಯಕ್. ಅಷ್ಟೇ ಅಲ್ಲ ದಂಡ ಪಾವತಿಗೆ ಸರ್ಕಾರದ ಹಣವನ್ನು ಬಳಸಿ ಮತ್ತೊಂದು ಸಮಸ್ಯೆಯನ್ನು ಸೃಷ್ಠಿಸಿದ್ದಾರೆ.
ಅತ್ಯಂತ ಅಪರೂಪದ ಹಾಗೂ ಮಹತ್ವದ ಪ್ರಕರಣವೊಂದರಲ್ಲಿ ಮಾಹಿತಿ ವಿಳಂಬ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಾಯಕ್ ಅವರಿಗೆ 1 ಲಕ್ಷ ರೂ. ದಂಡ ವಿಧಿಸಿದೆ.
ಮುಖ್ಯ ಮಾಹಿತಿ ಹಕ್ಕು ಆಯುಕ್ತ ಎ.ಕೆ.ಎಂ ನಾಯಕ್ ನ್ಯಾಯಾಂಗದ ವಿರುದ್ಧ ಹೋರಾಟ ನಡೆಸಿ ಸುಪ್ರೀಂಕೋರ್ಟ್ ನಲ್ಲಿ ಕೆಳಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದರು. ಆದರೆ ಸುಪ್ರೀಂಕೋರ್ಟ್, ನಾಯಕ್ ರ ಹೋರಾಟವನ್ನು ಕೋರ್ಟ್ ಸಮಯ ಹಾಳು ಹಾಗೂ ಸಾರ್ವಜನಿಕರ ಹಣ ವೃಥಾ ಖರ್ಚು ಎಂದು ಛೀಮಾರಿ ಹಾಕಿದೆ. ಅಷ್ಟೇ ಅಲ್ಲದೇ ಮಾಡಿದ ತಪ್ಪಿಗಾಗಿ 1 ಲಕ್ಷ ರೂ. ದಂಡ ಪಾವತಿಸುವಂತೆ ಆದೇಶಿಸಿತ್ತು.
ಆದರೆ ನಾಯಕ್ ಅವರು ದಂಡ ಪಾವತಿಸಲು ಸರಕಾರದ ಹಣವನ್ನು ಬಳಸಿ ಮತ್ತೊಂದು ಸಮಸ್ಯೆಗೆ ಸಿಲುಕಿದ್ದಾರೆ. ಆ ವಿಚಾರ ಈಗ ರಾಜಭವನದ ಮೆಟ್ಟಿಲೇರಿದ್ದು, ನಾಯಕ್ ಅವರನ್ನು ವಜಾಗೊಳಿಸಬೇಕೆಂಬ ಒತ್ತಡ ರಾಜ್ಯಪಾಲರ ಮೇಲೆ ಹೆಚ್ಚಾಗುತ್ತಿದೆ.
ವಿಚಿತ್ರವೆಂದರೆ ನಾಯಕ್ ಅವರು 1 ಲಕ್ಷ ರೂ. ದಂಡವನ್ನು ಸರಕಾರದ ಬೊಕ್ಕಸದಿಂದ ಸುಪ್ರೀಂ ಕೋರ್ಟ್ ಗೆ ಪಾವತಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದರಿಂದ ಸಿಟ್ಟಿಗೆದ್ದಿರುವ ಮಾಹಿತಿ ಹಕ್ಕು ಹೋರಾಟಗಾರರು ಮುಖ್ಯ ಆಯುಕ್ತ ನಾಯಕ್ ಅವರನ್ನು ವಜಾಗೊಳಿಸಬೇಕೆಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಅವರನ್ನು ಭ್ರಷ್ಟಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ಬಂಧಿಬೇಕೆಂದು ಹಿರಿಯ ವಕೀಲರ ಶಶಿಕುಮಾರ್ ಲೋಕಯಿಕ್ತದ ಮೊರೆ ಹೋಗಲು ಸಜ್ಜಾಗಿದ್ದಾರೆ.
ಸಾಫ್ಟ್ ವೇರ್ ತಂತ್ರಜ್ಞ ಎನ್ ಅನಬರಸನ್ ಆರ್ ಟಿ ಐ 4-01-2007 ರಲ್ಲಿ ಮಾಹಿತಿಗಾಗಿ 6(1) ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಹೈಕೋರ್ಟ್ ನಲ್ಲಿರುವ ತನ್ನ ಕೇಸುಗಳ (ಕೆಎಸಿ 379, ಸಿಒಎಂ2008) ಬಗ್ಗೆ ಮಾಹಿತಿ ಕೇಳಿದ್ದರು. ಹೈಕೋರ್ಟ್ ನಲ್ಲಿ ರಿಟ್ ಗಳನ್ನು ಹೇಗೆ ಪರಿಶೀಲನೆ ಹಾಗೂ ವರ್ಗೀಕರಿಸಲಾಗುತ್ತದೆ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಹೈಕೋರ್ಟ್ , ಕಾನೂನು ಪುಸ್ತಕಗಳಲ್ಲೇ ಇದೇ ನೋಡಬಹುದು ಎಂದು 3-8-2007 ರಂದು ಹೇಳಿತ್ತು. ಹಾಗೇಯೇ ಈ ಬಗ್ಗೆ ಅಸಮಧಾನ ಇದ್ದರೆ ಆರ್ ಟಿಐ ಕಾಯ್ದೆಯ 9(1) ರಲ್ಲಿ ಮೇಲ್ಮನವಿ ಸಲ್ಲಿಸಿ ಎಂದು ಹೈಕೋರ್ಟ್ ತಿಳಿಸಿತ್ತು.
ಆದರೆ ಅನಬರಸನ್ ಮೇಲ್ಮನವಿ ಸಲ್ಲಿಸದೆ 17-01-2008 ರಂದು ಮಾಹಿತಿ ಹಕ್ಕು ಆಯೋಗಕ್ಕೆ 18(1) ರ ಪ್ರಕಾರ ದೂರು ಸಲ್ಲಿಸಿದ್ದರು. ಈ ಬಗ್ಗೆ ಆಯೋಗದ ಮುಖ್ಯ ಆಯುಕ್ತ ಕೆ ಕೆ ಮಿಶ್ರಾ ವಿಚಾರಣೆ ನಡೆಸಿ, ಅನಬರಸ್ ಕೇಳಿದ ಮಾಹಿತಿಯನ್ನು 15 ದಿನಗಳಲ್ಲಿ ನೀಡಬೇಕೆಂದು 14.05.2008 ರಂದು ಆದೇಶ ನೀಡಿದ್ದರು. ಆದರೆ ಅನಬರಸನ್ ಕೇಳಿದ ಎಲ್ಲ ಮಾಹಿತಿಗಳನ್ನು ಒದಗಿಸಲು ಒದಗಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆಯೋಗದ ಕೆ ಕೆ ಮಿಶ್ರಾ ನೀಡಿದ್ದ ತೀರ್ಪನ್ನು ವಜಾಗೊಳಿಸಿತ್ತು.
ಆರಂಭದಿಂದಲೂ ಕಾನೂನು ಹೋರಾಟ ನಡೆಸುತ್ತಿದ್ದ ಅನಬರಸನ್ ತಟಸ್ಥವಾಗುತ್ತಾರೆ. ಆಯೋಗ ಹೈಕೋರ್ಟ್ ದ್ವಿಸದಸ್ಯ ಪೀಠದ ಮುಂದೆ ಕೊಂಡೊಯ್ದು ರಿಟ್ ಅಪೀಲು ಹಾಕುತ್ತದೆ. ಆದರೆ ಅನಬರಸನ್ ಅವರನ್ನು ವಾದಿಗಳನ್ನಾಗಿ ಮಾಡುವ ಬದಲು ಪ್ರತಿವಾದಿಗಳನ್ನಾಗಿ ಮಾಡಲಾಗುತ್ತದೆ. ಹಾಗೆಯೇ ಹೈಕೋರ್ಟ್ ಮಾಹಿತಿ ಅಧಿಕಾರಿಯನ್ನು ಮೊದಲು ಪ್ರತಿವಾದಿಯನ್ನಾಗಿ ಮಾಡಲಾಗುತ್ತದೆ. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ 15-06-2012 ರಿಟ್ ಅಪೀಲನ್ನು ವಜಾಗೊಳಿಸುತ್ತದೆ.