ನವದೆಹಲಿ: ರೈತರ ತೀವ್ರ ವಿರೋಧದಿಂದಾಗಿ 2021ರ ನವೆಂಬರ್ನಲ್ಲಿ ಕೇಂದ್ರ ಸರ್ಕಾರ ಹಿಂಪಡೆದ 3 ಕೃಷಿ ಕಾಯ್ದೆಗಳು ರೈತರಿಗೆ ಪೂರಕವಾಗಿದ್ದವು ಎಂದು ಈ ಬಗ್ಗೆ ಅಧ್ಯಯನಕ್ಕಾಗಿ ಸುಪ್ರೀಂ ಕೋರ್ಟ್ನಿಂದ ನೇಮಕವಾಗಿದ್ದ ಸಮಿತಿ ಪ್ರತಿಪಾದಿಸಿದೆ.
ಈ ಕಾಯ್ದೆಗಳಿಂದ ರೈತರಿಗೆ ಲಾಭವಾಗಲಿದ್ದು, ಯಾವುದೇ ಕಾರಣಕ್ಕೂ ಅವುಗಳನ್ನು ಹಿಂಪಡೆಯಬಾರದು ಎಂದು ಈ ಸಮಿತಿ ಶಿಫಾರಸು ಮಾಡಿತ್ತು ಎಂದು ಇದೀಗ ತಿಳಿದುಬಂದಿದೆ.
ಈ ಕುರಿತು 2021ರ ಮಾರ್ಚ್ 19ರಂದು ಸುಪ್ರೀಂ ಕೋರ್ಟ್ಗೆ ಸಲ್ಲಿಕೆ ಮಾಡಿದ್ದ ಸಮಿತಿಯ ವರದಿ ಇದೀಗ ಬಹಿರಂಗವಾಗಿದೆ. ಮೂವರು ಸದಸ್ಯರ ಈ ಸಮಿತಿಯು, ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡುವ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡಬೇಕು ಎಂಬುದು ಸೇರಿದಂತೆ ಈ ಕಾಯ್ದೆಯಲ್ಲಿ ಮತ್ತಿತ್ತರ ಬದಲಾವಣೆಗಳನ್ನು ಮಾಡಬೇಕು ಎಂದು ಸಲಹೆ ನೀಡಿತ್ತು.
ಸಮಿತಿಯಲ್ಲಿದ್ದ ಮೂವರು ಸದಸ್ಯರ ಪೈಕಿ ಅನಿಲ್ ಗಣಾವತ್ ಎಂಬುವರು ಈ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ‘ಈ ವರದಿಯನ್ನು ಸಾರ್ವಜನಿಕಗೊಳಿಸಲು ಸುಪ್ರೀಂ ಕೋರ್ಟ್ಗೆ 3 ಬಾರಿ ಪತ್ರ ಬರೆದಿದ್ದೆವು. ಆದರೆ ನಮಗೆ ಸುಪ್ರೀಂನಿಂದ ಪ್ರತಿಕ್ರಿಯೆ ಮಾತ್ರ ಸಿಗಲಿಲ್ಲ. ಇದೀಗ ಈ ಕಾಯ್ದೆಗಳನ್ನು ಹಿಂಪಡೆಯಲಾದ ಕಾರಣ ಈ ವರದಿಗೆ ಯಾವುದೇ ಮಹತ್ವವಿಲ್ಲ. ಇದೇ ಕಾರಣಕ್ಕೆ ವರದಿಯ ಸಾರಂಶವನ್ನು ಬಿಡುಗಡೆಗೊಳಿಸಿದ್ದೇನೆ’ ಎಂದು ಹೇಳಿದರು.
ಈ ಕಾಯ್ದೆಗಳಿಂದ ಭವಿಷ್ಯದಲ್ಲಿ ಕೃಷಿ ವಲಯಕ್ಕೆ ಅನುಕೂಲವಾಗುತ್ತಿತ್ತು. ಒಟ್ಟಾರೆ 73 ರೈತ ಸಂಘಟನೆಗಳ ಪೈಕಿ 3.3 ಕೋಟಿ ರೈತರನ್ನು ಒಳಗೊಂಡ 61 ರೈತ ಸಂಘಟನೆಗಳು ನೂತನ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದರು ಎಂದು ಅವರು ಹೇಳಿದ್ದಾರೆ.