ಮನೆ ಅಪರಾಧ ಮದ್ಯಪಾನದ ಮತ್ತಿನಲ್ಲಿ ಸ್ನೇಹಿತರ ಜಾಲಿ ರೈಡ್’ಗೆ ಫುಡ್ ಡೆಲಿವರಿ ಬಾಯ್ ಬಲಿ

ಮದ್ಯಪಾನದ ಮತ್ತಿನಲ್ಲಿ ಸ್ನೇಹಿತರ ಜಾಲಿ ರೈಡ್’ಗೆ ಫುಡ್ ಡೆಲಿವರಿ ಬಾಯ್ ಬಲಿ

0

ಬೆಂಗಳೂರು: ಮದ್ಯಪಾನದ ಮತ್ತಿನಲ್ಲಿದ್ದ ಸ್ನೇಹಿತರು ಅಜಾಗರೂಕತೆಯಿಂದ ಕಾರನ್ನು ಓಡಿಸಿ ಬೈಕ್​ ನಲ್ಲಿ ಹೋಗುತ್ತಿದ್ದ  ಫುಡ್ ಡೆಲಿವರಿ ಬಾಯ್ ಬಲಿಯಾಗಿರುವ ಘಟನೆ ತಡರಾತ್ರಿ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್​ ಆರ್​​​ ನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

Join Our Whatsapp Group

ಜೊಮ್ಯಾಟೊದಲ್ಲಿ ಫುಡ್ ಡೆಲಿವರಿ ಮಾಡಿಕೊಂಡಿದ್ದ ಹೆಚ್.ಡಿ.ಕೋಟೆ ಮೂಲದ ಪ್ರಸನ್ನ ಕುಮಾರ್ ಮೃತ ದುರ್ದೈವಿ.

ಅಪಘಾತದ ನಂತರ ರಕ್ತದ ಮಡುವಿನಲ್ಲಿ ಬಿದ್ದವನನ್ನು ಬಿಟ್ಟು ಪರಾರಿಯಾಗುತ್ತಿದ್ದ ನಾಲ್ವರ ಪೈಕಿ ಚಾಲಕ ವಿನಾಯಕ್ ಎಂಬಾತನನ್ನು ಸ್ಥಳಿಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ವಿವರ: ವಿಜಯನಗರ ನಿವಾಸಿಯಾದ ವಿನಾಯಕ್​ ರಾಜಾಜಿನಗರ ಮಹೀಂದ್ರ ಕಾರ್ ಶೋ ರೂಂನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ವಿನಾಯಕ್​ಗೆ ಇನ್ಸೆಂಟಿವ್ ಹಣ ಬಂದಿತ್ತು ಎನ್ನಲಾಗಿದೆ. ಅದೇ ಹಣದಲ್ಲಿ ಸ್ನೇಹಿತರೆಲ್ಲರೂ ಸೇರಿ ಪಾರ್ಟಿ ಕೂಡಾ ಮಾಡಿದ್ದರು. ಪಾರ್ಟಿ ನಂತರ ಮದ್ಯಪಾನದ ಅಮಲಿನಲ್ಲೇ ಅಜಾಗರೂಕತೆಯಿಂದ ಕಾರಿನಲ್ಲಿ ಬಂದಿದ್ದಾರೆ. ಈ ಮಧ್ಯೆ ಒಬ್ಬ ಸ್ನೇಹಿತನನ್ನು ಡ್ರಾಪ್ ಮಾಡಲು ಆರ್.ಆರ್. ನಗರದ ಕಡೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಮುಂದೆ ಬೈಕಿನಲ್ಲಿ ತೆರಳುತ್ತಿದ್ದ ಪ್ರಸನ್ನ ಕುಮಾರ್​ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಬಳಿಕ ಕಾರನ್ನು ನಿಲ್ಲಿಸದೇ ಪ್ರಸನ್ನ ಕುಮಾರ್ ​ನ ದೇಹವನ್ನು ಸುಮಾರು 100 ಮೀಟರ್ ದೂರ ಕಾರಿನಡಿ ಎಳೆದೊಯ್ದಿದ್ದಾರೆ. ಆದರೂ ಸ್ಥಳದಲ್ಲಿ ಕಾರು ನಿಲ್ಲಿಸದ ಆರೋಪಿಗಳು ಎಸ್ಕೇಪ್ ಆಗಿದ್ದರು.

ಈ ವೇಳೆ ಸುಮಾರು ಒಂದು ಕಿಲೋ ಮೀಟರ್ ​ನಷ್ಟು ದೂರ ಚೇಸ್ ಮಾಡಿಕೊಂಡು ಬಂದ ಇತರ ವಾಹನ ಸವಾರರು ಆರ್.ಆರ್. ನಗರ ಮೆಟ್ರೊ ನಿಲ್ದಾಣದ ಬಳಿ ಕಾರನ್ನು ಅಡ್ಡಗಟ್ಟಿದ್ದಾರೆ. ಅಷ್ಟೊತ್ತಿಗಾಗಲೇ ಕಾರಿಲ್ಲಿದ್ದ ಮೂವರು ಯುವತಿಯರು, ಒಬ್ಬ ಯುವಕ ಕಾರಿಂದ ಇಳಿದು ಎಸ್ಕೇಪ್ ಆಗಿದ್ದಾರೆ.

ಈ ವೇಳೆ ಕಾರಿನ ಗಾಜು ಪುಡಿಪುಡಿಗೊಳಿಸಿದ ಸ್ಥಳೀಯರು ಚಾಲಕ ವಿನಾಯಕ್ ​ನನ್ನು ಥಳಿಸಿ ನಂತರ ಬ್ಯಾಟರಾಯನಪುರ ಸಂಚಾರಿ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ತಪಾಸಣೆ ವೇಳೆ ಚಾಲಕ‌ ಮದ್ಯಪಾನ ಮಾಡಿರುವುದು ಬೆಳಕಿಗೆ ಬಂದಿದೆ.

ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಅನ್ನಭಾಗ್ಯ ಯೋಜನೆ ಜಾರಿಗೆ 2.38 ಲಕ್ಷ ಟನ್ ಅಕ್ಕಿ ಕೊರತೆ: ಸಿಎಂ ಸಿದ್ದರಾಮಯ್ಯ
ಮುಂದಿನ ಲೇಖನಹುಬ್ಬಳ್ಳಿಯಲ್ಲಿ ವಂದೇ ಮಾತರಂ ರೈಲು ಪ್ರಾಯೋಗಿಕ ಸಂಚಾರ ಆರಂಭ